ಬೆಂಗಳೂರು: ‘ನಾನು ಬಿಜೆಪಿಗೆ ಸೇರುತ್ತೇನೆ ಎಂಬ ಮಾತು ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಅದು ಶುದ್ಧ ಸುಳ್ಳು. ನಾನು ಸಾಯುವವರೆಗೂ ಕಾಂಗ್ರೆಸ್ನಲ್ಲೇ ಇರುತ್ತೇನೆ’ ಎಂದು ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ್ ಕೆ.ಕೋಳಿವಾಡ ಸ್ಪಷ್ಟಪಡಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ವಿಧಾನಸಭಾಧ್ಯಕ್ಷರಾದ ನನ್ನ ತಂದೆ ಕೆ.ಬಿ.ಕೋಳಿವಾಡ ಅವರು 1968ರಿಂದ ಕಾಂಗ್ರೆಸ್ನಲ್ಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಳೆದ ನಾನು ಜಾತ್ಯತೀತ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದೇನೆ. ಬಿಜೆಪಿಯ ಸಿದ್ಧಾಂತಗಳು ನನ್ನ ಚಿಂತನೆಗಳಿಗೆ ಹೊಂದುವುದಿಲ್ಲ. ಹಾಗಾಗಿ ಆ ಪಕ್ಷ ಸೇರುವುದಿಲ್ಲ’ ಎಂದರು.
‘ಪಕ್ಷ ಸೇರುವಂತೆ ಬಿಜೆಪಿಯಿಂದ ಯಾರೂ ಸಂಪರ್ಕಿಸಿಲ್ಲ’ ಎಂದು ಅವರು ತಿಳಿಸಿದರು.
‘ರಾಣೆಬೆನ್ನೂರು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ಮನದಲ್ಲಿದೆ. ತಂದೆ ರಾಜಕೀಯ ನಿವೃತ್ತಿ ಘೋಷಿಸಿದ ಬಳಿಕ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.