ADVERTISEMENT

ಸಾಲಬಾಧೆ ತಾಳಲಾರದೆ ರೈತರಿಬ್ಬರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 14:01 IST
Last Updated 14 ಜೂನ್ 2017, 14:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಸಾಲಬಾಧೆಯಿಂದ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಳ್ಳೂರ, ಇಂಡಿ ತಾಲ್ಲೂಕಿನ ಶಿರಶ್ಯಾಡ ಗ್ರಾಮದಲ್ಲಿ ನಡೆದಿದೆ.

ಹಳ್ಳೂರ ಗ್ರಾಮದ ಹಣಮಂತ ಯಲ್ಲಪ್ಪ ಭಜಂತ್ರಿ (48), ಶಿರಶ್ಯಾಡದ ಅಶೋಕ ಶಿವಸಂಗಪ್ಪ ಬಬಲೇಶ್ವರ (35) ಮೃತಪಟ್ಟ ರೈತರು.

ಹಣಮಂತ ಭಜಂತ್ರಿ ಮಂಗಳವಾರ ಢವಳಗಿಯ ಸಿಂಡಿಕೇಟ್‌ ಬ್ಯಾಂಕ್‌ಗೆ ತೆರಳಿ ತನ್ನ ಖಾತೆಗೆ ಬೆಳೆ ಪರಿಹಾರ ಜಮೆ ಆಗಿದೆಯೇ ಎಂಬುದನ್ನು ಪರೀಕ್ಷಿಸಿಕೊಂಡಿದ್ದಾರೆ. ಈ ಸಂದರ್ಭ ಹಣ ಜಮೆಯಾಗದಿರುವುದು ಖಚಿತಪಟ್ಟಿದೆ. ಇದರಿಂದ ಮನನೊಂದು ಮುಸ್ಸಂಜೆ ವೇಳೆ ವಿಷ ಸೇವಿಸಿದ್ದಾರೆ. ಅಸ್ವಸ್ಥಗೊಂಡ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಬುಧವಾರ ಮೃತಪಟ್ಟಿದ್ದಾರೆ ಎಂದು ಮುದ್ದೇಬಿಹಾಳ ಪೊಲೀಸರು ತಿಳಿಸಿದ್ದಾರೆ. ಇವರು ₹ 2 ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ.

ADVERTISEMENT

ವಿದ್ಯುತ್‌ ವೈರ್‌ ಹಿಡಿದು ಆತ್ಮಹತ್ಯೆ: ಅಶೋಕ ಶಿವಸಂಗಪ್ಪ ಬಬಲೇಶ್ವರ (35) ಅವರು ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್‌ ವೈರ್ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಏಳು ಎಕರೆ ಜಮೀನು ಹೊಂದಿದ್ದ ಇವರು, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನಲ್ಲಿ ₹ 3 ಲಕ್ಷ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನಲ್ಲಿ ₹ 80 ಸಾವಿರ ಬೆಳೆ ಸಾಲ ಪಡೆದಿದ್ದಾರೆ. ಸತತ ಬೆಳೆ ನಷ್ಟದಿಂದ ಕಂಗೆಟ್ಟಿದ್ದ ಅಶೋಕ ಅವರು ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಇಂಡಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.