ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಸಂಬಂಧ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತಿನ ಚಕಮಕಿ ನಡೆಯಿತು.
ಜಿಲ್ಲಾ ಕಸಾಪದಲ್ಲಿ ಭ್ರಷ್ಟಾಚಾರ ನಡೆದಿದ್ದು ತನಿಖೆಗೆ ಒಳಪಡಿಸುವಂತೆ ಸಾಹಿತಿ ಬನ್ನೂರು ಕೆ.ರಾಜು ಆಗ್ರಹಿಸಿದಾಗ ಗದ್ದಲ ಏರ್ಪಟ್ಟಿತು.
‘ಮೈಸೂರು ಜಿಲ್ಲಾ ಕಸಾಪವನ್ನು ವಿಸರ್ಜಿಸಿ ಕೇಂದ್ರ ಕಸಾಪ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ಅಂಬಾವಿಲಾಸ ಅರಮನೆಯಲ್ಲೇ ಸಮ್ಮೇಳನ ನಡೆಸಬೇಕು. ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಬೇಕು’ ಎಂದು ಅವರು ಪಟ್ಟುಹಿಡಿದರು.
ಈ ಹಂತದಲ್ಲಿ ಮೈಸೂರು ಕನ್ನಡ ವೇದಿಕೆ ಸದಸ್ಯರೊಬ್ಬರು, ‘ಇದು ಕೇವಲ ಕಾಂಗ್ರೆಸ್ ಶಾಸಕ ವಾಸು ಅವರ ಸಮ್ಮೇಳನ ಅಲ್ಲ. ಬಿಜೆಪಿ, ಜೆಡಿಎಸ್ ಪ್ರತಿನಿಧಿಗಳೂ ಇರಬೇಕಿತ್ತು’ ಎಂದಿದ್ದು ವಾಗ್ವಾದಕ್ಕೆ ಕಾರಣವಾಯಿತು.
ಜಿಲ್ಲಾ ಕಸಾಪ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದ ಬನ್ನೂರು ರಾಜು ಹಾಗೂ ಕನ್ನಡ ವೇದಿಕೆ ಸದಸ್ಯರು ಸಮ್ಮೇಳನಕ್ಕೆ ಧಿಕ್ಕಾರ ಕೂಗುತ್ತಾ ಜಿಲ್ಲಾ ಪಂಚಾಯಿತಿ ಸಭಾಂಗಣದಿಂದ ಹೊರನಡೆದರು. ಹೊರಗಡೆ ಧರಣಿ ನಡೆಸಿ ಘೋಷಣೆ ಕೂಗಿದರು.
ಕಸಾಪ ಅಧ್ಯಕ್ಷ ಮನು ಬಳಿಗಾರ, ಶಾಸಕ ವಾಸು, ಮೇಯರ್ ಎಂ.ಜೆ.ರವಿಕುಮಾರ್, ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ಸಮ್ಮುಖದಲ್ಲೇ ಈ ಗದ್ದಲ ಉಂಟಾಯಿತು. ಸಾಹಿತಿಗಳು ಹಾಗೂ ವಿವಿಧ ಕನ್ನಡ ಸಂಘಟನೆಗಳ ಸದಸ್ಯರು ಸಲಹೆ, ಸೂಚನೆ ನೀಡಿದರು. ಸಮ್ಮೇಳನ ನವೆಂಬರ್ 24ರಿಂದ 26ವರೆಗೆ ಇಲ್ಲಿ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.