ADVERTISEMENT

ಸಿ.ಎಂ ವಿರುದ್ಧ ಸಹಿ ಸಂಗ್ರಹಣೆ ಇಲ್ಲ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST

ಬೆಂಗಳೂರು: ‘ರಾಜ್ಯ ಬಿಜೆಪಿ ಘಟಕದಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದ ವಿರುದ್ಧ ಪಕ್ಷದಲ್ಲಿ ಸಹಿ ಸಂಗ್ರಹಣೆ ನಡೆದಿದೆ’ ಎಂಬ ವರದಿಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ತಳ್ಳಿಹಾಕಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಆಚಾರ್ಯ, ‘ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಕಾಣಿಸಿಕೊಂಡಿದೆ ಎಂಬುದು ಸತ್ಯಕ್ಕೆ ದೂರವಾಗಿದೆ, ಪಕ್ಷದ ಎಲ್ಲ ಶಾಸಕರೂ ಯಡಿಯೂರಪ್ಪ ಅವರ ಜೊತೆಗಿದ್ದಾರೆ’ ಎಂದರು.

‘ಪಕ್ಷದ ಕಚೇರಿಯಲ್ಲಿ ಬುಧವಾರ ನಡೆದ ಸಭೆ ಮುಂಬರುವ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದ್ದಾಗಿತ್ತು. ಅದೇ ಸಮಯದಲ್ಲಿ ವಿಧಾನಸೌಧದಲ್ಲಿ ಸಭಾಧ್ಯಕ್ಷರು ಮತ್ತು ಸಭಾಪತಿಗಳೊಂದಿಗೆ ಬೇರೊಂದು ಸಭೆಯಲ್ಲಿ ನಾನು ಮತ್ತು ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದೆವು. ಹಾಗಾಗಿ ಪಕ್ಷದ ಸಭೆಗೆ ಹೋಗಲಿಲ್ಲ, ಇದಕ್ಕೆ ಬೇರೆ ಅರ್ಥ ಕಲ್ಪಿಸಲಾಗಿದೆ’ ಎಂದರು.

‘ಕಂಡು ಕೇಳರಿಯದ ಮಾಹಿತಿ’: ‘ಎಚ್.ಡಿ. ದೇವೇಗೌಡ ಅವರು ಸಂಸತ್ತಿನಲ್ಲಿ ಬುಧವಾರ ಪ್ರೇರಣಾ ಶೈಕ್ಷಣಿಕ ಮತ್ತು ಸಾಮಾಜಿಕ ಟ್ರಸ್ಟ್‌ಗೆ ದೇಣಿಗೆ ಬಂದಿರುವುದರ ಕುರಿತು ಆಪಾದನೆ ಮಾಡಿದ್ದಾರೆ, ಅವರ ಆಪಾದನೆಗೆ ಪಕ್ಷದ ಸಂಸದರು ತಕ್ಕ ಉತ್ತರವನ್ನೂ ನೀಡಿದ್ದಾರೆ’ ಎಂದ ಆಚಾರ್ಯ, ‘ರಾಜ್ಯ ಕಂಡು ಕೇಳರಿಯದಂತಹ ಮಾಹಿತಿಯೊಂದನ್ನು ನಿಮಗೆ ನೀಡುತ್ತೇನೆ’ ಎಂದರು. ‘ಆಪಾದನೆ ಮಾಡಿ ಓಡಿಹೋಗುವ ಬುದ್ಧಿ ಸಾಕಷ್ಟು ಮಂದಿಗೆ ಇದೆ’ ಎಂದು ಅವರು ಕುಟುಕಿದರು. ಸಚಿವರಾದ ವಿ. ಸೋಮಣ್ಣ, ಮುರುಗೇಶ ನಿರಾಣಿ, ಸುರೇಶ್ ಕುಮಾರ್ ಮತ್ತು ಕೃಷ್ಣ ಪಾಲೇಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.