ADVERTISEMENT

ಸಿದ್ದಗಂಗೆ: ಗುರುವಂದನೆ ಇಂದು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2011, 19:00 IST
Last Updated 23 ಏಪ್ರಿಲ್ 2011, 19:00 IST
ಸಿದ್ದಗಂಗೆ: ಗುರುವಂದನೆ ಇಂದು
ಸಿದ್ದಗಂಗೆ: ಗುರುವಂದನೆ ಇಂದು   

ತುಮಕೂರು: ಸಿದ್ದಗಂಗಾ ಮಠಾಧೀಶ  ಡಾ.ಶಿವಕುಮಾರ ಸ್ವಾಮೀಜಿ ಅವರ 104ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಮಹೋತ್ಸವ ಆಚರಣೆಗೆ ’ಸಿದ್ದಗಂಗೆ’ ಸಜ್ಜುಗೊಂಡಿದೆ.

ಇಂದು ಸಿದ್ದಗಂಗೆಯಲ್ಲಿ ನಡೆಯಲಿರುವ ಜನ್ಮ ದಿನೋತ್ಸವ ಆಚರಣೆಗಾಗಿ ಕಳೆದ 15 ದಿನಗಳಿಂದ ಮಠದ ಆವರಣದಲ್ಲಿ ಸಿದ್ಧತೆ ನಡೆಯುತ್ತಿದ್ದು, ಶನಿವಾರವೂ ಸಹ ಅಂತಿಮ ಹಂತದ ಸಿದ್ಧತೆ ಭರದಿಂದ ನಡೆದವು.
ಮಠದ ಆವರಣ ತಳಿರು-ತೋರಣ, ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. ನಗರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲೂ ಸಮಾರಂಭಕ್ಕೆ ಶುಭಕೋರುವ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ.

ನಿರಂತರ ಕಾಯಕ:ಭಾನುವಾರ ಮಠದಲ್ಲಿ ಬೃಹತ್ ಕಾರ್ಯಕ್ರಮ ಇದ್ದರೂ; ಶಿವಕುಮಾರ ಸ್ವಾಮೀಜಿ ತಮ್ಮ ನಿತ್ಯದ ಕಾಯಕವನ್ನು ಚಾಚೂ ತಪ್ಪದೇ ಪಾಲಿಸಿದರು. ಎಂದಿನಂತೆಯೇ ಪೂಜೆ, ಜಪ-ತಪ, ಭಕ್ತರ ದರ್ಶನದ ನಂತರ ಕಾರ್ಯಕ್ರಮದ ಉಸ್ತುವಾರಿಗಾಗಿ ಮಧ್ಯಾಹ್ನ ನೆತ್ತಿ ಸುಡುವ ಬಿಸಿಲಿನಲ್ಲೇ ಎಲ್ಲೆಡೆ ತೆರಳಿ ಉಸ್ತುವಾರಿ ಹೊತ್ತಿದ್ದ ಪ್ರಮುಖರಿಗೆ ಕೆಲ ಸೂಚನೆ-ಸಲಹೆ ನೀಡಿದರು.

ನಿರಂಜನ ಶ್ರೀ: ಶಿವಕುಮಾರ ಸ್ವಾಮೀಜಿ ಸನ್ಯಾಸಾಶ್ರಮ ಸ್ವೀಕರಿಸಿ ಕಳೆದ ಮಾರ್ಚ್ ಮೂರಕ್ಕೆ 80 ವಸಂತಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರ ಬದುಕು-ಚಿಂತನೆ ಕುರಿತ ‘ನಿರಂಜನ ಶ್ರೀ’ ಗ್ರಂಥ ಸಮಾರಂಭದಲ್ಲಿ ಬಿಡುಗಡೆಗೊಳ್ಳಲಿದೆ.

ದಾಸೋಹ:ಗುರುವಂದನಾ ಮಹೋತ್ಸವಕ್ಕೆ ನಾಡಿನ ವಿವಿಧೆಡೆಯಿಂದ ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಹತ್ತು ಕಡೆ ದಾಸೋಹದ ವ್ಯವಸ್ಥೆ ಮಾಡಿದ್ದು, ಐನೂರಕ್ಕೂ ಹೆಚ್ಚು ಬಾಣಸಿಗರು, ಏಳು ಸಾವಿರಕ್ಕೂ ಹೆಚ್ಚು ಸ್ವಯಂ ಸೇವಕರ ಪಡೆ ಭಕ್ತರ ಹಸಿವು ನೀಗಿಸುವ ನಿರಂತರ ಕಾಯಕದಲ್ಲಿ ತೊಡಗಿದೆ. ಏಕ ಕಾಲದಲ್ಲಿ 12 ಸಾವಿರ ಮಂದಿ ಪ್ರಸಾದ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಮಠದ ಮೂಲಗಳು ಶನಿವಾರ ‘ಪ್ರಜಾವಾಣಿ’ಗೆ ತಿಳಿಸಿದವು.

ಸಿದ್ದಗಂಗಾ ಶ್ರೀ ಪ್ರಶಸ್ತಿ:ಮಠದ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ನೀಡುತ್ತಿರುವ ಒಂದು ಲಕ್ಷದ ನಗದು, ಸ್ಮರಣಿಕೆಯ ‘ಸಿದ್ದಗಂಗಾ ಶ್ರೀ’ ಪ್ರಶಸ್ತಿಯನ್ನು  ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.