ADVERTISEMENT

ಸಿದ್ದರಾಮಯ್ಯ ಕೈ ಬಲಪಡಿಸಲು ನಿರ್ಣಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 20:16 IST
Last Updated 21 ಡಿಸೆಂಬರ್ 2013, 20:16 IST

ದಾವಣಗೆರೆ: ಅಹಿಂದ ನಾಯಕರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ  ಸ್ಥಾನದಿಂದ ಕೆಳಗಿಳಿಸಲು ಹುನ್ನಾರ ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ  ಅದಕ್ಕೆ ಆಸ್ಪದ ಕೊಡಬಾರದು  ಎಂದು ಶನಿವಾರ ಇಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಮ್ಮಿಕೊಂಡಿದ್ದ ‘ಅಹಿಂದ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ’ಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಉಪಾಧ್ಯಕ್ಷ ಕೆ.ಎಂ.ರಾಮಚಂದ್ರಪ್ಪ ಮಾತ­ನಾಡಿ,‘ಲೋಕಸಭಾ ಚುನಾವಣೆಯ ನಂತರ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಹುನ್ನಾರ ಹೆಣೆಯಲಾಗುತ್ತಿದೆ. ಸದ್ಯ ಲೋಕಸಭಾ ಚುನಾವಣೆ ಇರುವುದರಿಂದ ಈ ಹುನ್ನಾರವನ್ನು ಗೋಪ್ಯವಾಗಿ ನಡೆಸ­ಲಾಗುತ್ತಿದೆ. ಎಂಥ ಪರಿಸ್ಥಿತಿ ಉಂಟಾದರೂ ಸರಿ, ಹಿಂದುಳಿದ ಮುಖಂಡರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಲ್ಲಬೇಕು. ಜನವರಿ 12ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಅಹಿಂದ ಜಾಗೃತಿ ಸಮಾವೇಶದಲ್ಲಿ ಹಿಂದುಳಿದ ಜಾತಿಗಳ ಶಕ್ತಿ ಪ್ರದರ್ಶನ ನಡೆಸಬೇಕು’ ಎಂದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಕಾಳೇಗೌಡ ಮಾತನಾಡಿ,‘ಚುನಾವಣೆಯ ಸಂದರ್ಭದಲ್ಲಿ ಉನ್ನತ ವರ್ಗದ ಮುಖಂಡರು ಹಿಂದುಳಿದ ಸಮುದಾಯಗಳ ಮತ ಮತ್ತು ಹಿಂದುಳಿದ ಮುಖಂಡರ, ಜನಪ್ರತಿನಿಧಿಗಳ ಬೆಂಬಲ ಪಡೆಯುತ್ತಾರೆ. ನಂತರ ಅವರು ಹಿಂದುಳಿದವರ ಪರವಾಗಿ ಯಾವ ಅಭಿವೃದ್ಧಿ ಕಾರ್ಯ ಮಾಡಿರುವ ನಿದರ್ಶನಗಳಿಲ್ಲ’ ಎಂದು ಹೇಳಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಗೌರವ ಅಧ್ಯಕ್ಷ ಪ್ರೊ.ಎನ್.ವಿ.ನರಸಿಂಹಯ್ಯ, ಉಪಾಧ್ಯಕ್ಷ ಸುರೇಶ್ ಲಾತೂರ್, ಕೆಂಗೋ ಹನುಮಂತಪ್ಪ, ಮುಖಂಡರಾದ ಎಸ್.ಶಂಕರ್, ಬಿ.ಎಂ.ಸತೀಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.