ಹೊಸನಗರ: ತಾಲ್ಲೂಕಿನ ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ (88) ಶುಕ್ರವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಮಠದ ಭಕ್ತ ಹರತಾಳು ಆನಂದಯ್ಯ ಅವರ ಮನೆಗೆ ಶುಕ್ರವಾರ ಪೂಜೆಗೆ ತೆರಳಿದ್ದ ಸ್ವಾಮೀಜಿ ಅಲ್ಲೇ ತಂಗಿದ್ದರು. ರಾತ್ರಿ 1.30ರ ವೇಳೆಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದರು.
ಭಕ್ತರ ಪ್ರೀತಿಯ ಅಜ್ಜಯ್ಯ: ಕಾಯಕಯೋಗಿ ಎಂದೇ ಭಕ್ತರಿಂದ ಕರೆಸಿಕೊಳ್ಳುತ್ತಿದ್ದ ಸಿದ್ದಲಿಂಗ ಶ್ರೀಗಳು ಸರಳ ಸಜ್ಜನ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದರು. ಶಿವಪೂಜೆ, ಜಪ-ತಪಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದ ಸ್ವಾಮೀಜಿಯನ್ನು ಭಕ್ತರು ‘ಅಜ್ಜಯ್ಯ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.
ಅಂತಿಮ ದರ್ಶನ: ಲಿಂಗೈಕ್ಯರಾದ ಹಿರಿಯಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅಂತಿಮ ದರ್ಶನಕ್ಕೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಮುರುಘಾ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಜಡೆ ಮಠ, ಕವಲೆದುರ್ಗಾ ಮಠ, ಮಳಲಿ ಮಠ, ಸಾಲೂರು ಮಠ, ಕೋಣಂದೂರು ಮಠದ ಸ್ವಾಮೀಜಿ ಬಂದಿದ್ದರು. ಅಪಾರ ಸಂಖ್ಯೆಯ ಭಕ್ತರು ಸ್ವಾಮೀಜಿಯ ಅಂತಿಮ ದರ್ಶನ ಪಡೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.