ADVERTISEMENT

ಸಿರಾಜಿನ್ ಬಾಷಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಬೆಂಗಳೂರು: ಲೋಕಾಯುಕ್ತ ವಿಶೇಷ ಕೋರ್ಟ್ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಜಾಮೀನು ತಿರಸ್ಕರಿಸಿ ಅತ್ತ ಆದೇಶ ಹೊರಡಿಸಿದರೆ, ಯಡಿಯೂರಪ್ಪನವರ ವಿರುದ್ಧ ದೂರು ದಾಖಲು ಮಾಡಿರುವ ವಕೀಲ ಸಿರಾಜಿನ್ ಬಾಷಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು ಮಾಡಲು ಇತ್ತ ಹೈಕೋರ್ಟ್, ರಿಜಿಸ್ಟ್ರಾರ್ ಅವರಿಗೆ ಶಿಫಾರಸು ಮಾಡಿದೆ.

ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಹಿಂದಕ್ಕೆ ಸರಿದ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು, ಈ ಶಿಫಾರಸು ಮಾಡಿದ್ದಾರೆ.
ವಿಶೇಷ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ ನ್ಯಾಯಮೂರ್ತಿಗಳು ಕಳೆದ ವಾರ ತಡೆ ನೀಡಿದ್ದರು.

ಸರಿಯಾಗಿ ವಿಚಾರಣೆ ನಡೆಸದೆ ಯಡಿಯೂರಪ್ಪನವರ ಪರ ಆದೇಶ ಹೊರಡಿಸಲಾಗಿದೆ ಎನ್ನುವುದು ಬಾಷಾ ಅವರ ಆರೋಪ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ವಿಚಾರಣೆಯನ್ನು ಬೇರೆ ನ್ಯಾಯಮೂರ್ತಿಗಳಿಗೆ ವರ್ಗಾಯಿಸಬೇಕು ಎಂದು ಕೋರಿ ಅವರು ಪ್ರಮಾಣ ಪತ್ರ ಸಲ್ಲಿಸಿದ್ದರು.

ಆತ್ಮಸಾಕ್ಷಿಗೆ ವಿರುದ್ಧ: ಈ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಶನಿವಾರ ಸುದೀರ್ಘ ವಾದ, ಪ್ರತಿವಾದ ನಡೆದವು. ಇದನ್ನು ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದಕ್ಕೆ ಸರಿದರು. `ನನ್ನ ಮೇಲೆ ನಂಬಿಕೆ ಇಲ್ಲದಿದ್ದರೆ ವಿಚಾರಣೆಯನ್ನು ಬೇರೊಬ್ಬ ನ್ಯಾಯಮೂರ್ತಿಗಳು ನಡೆಸಲಿ. ನ್ಯಾಯದಾನದಂತಹ ಪವಿತ್ರ ಕಾರ್ಯ ಮಾಡುವಾಗ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿದೆ. ವಕೀಲನಾಗಿ, ನ್ಯಾಯಮೂರ್ತಿಯಾಗಿ ಒಳ್ಳೆಯ ಸೇವೆ ಸಲ್ಲಿಸಿದ್ದೇನೆ.
 
ಆದರೆ ಸ್ವತಃ ವಕೀಲರೂ ಆಗಿರುವ ಬಾಷಾ ಅವರು ಈ ರೀತಿ ಪ್ರಮಾಣ ಪತ್ರ ಸಲ್ಲಿಸಿರುವುದು ಬೇಜವಾಬ್ದಾರಿಯನ್ನು ತೋರಿಸುತ್ತದೆ. ನ್ಯಾಯಾಂಗದ ಘನತೆಯನ್ನು ಕಾಪಾಡುವುದು ನನ್ನ ಕರ್ತವ್ಯ~ ಎಂದು ನ್ಯಾ.ಪಾಟೀಲ್ ಹೇಳಿದರು.

`ಈ ರೀತಿಯ ಪ್ರಮಾಣಪತ್ರವನ್ನು ಪುರಸ್ಕರಿಸಿದರೆ ಇದು ಬೇರೆಯವರಿಗೂ ಮಾದರಿಯಾಗುವ ಸಾಧ್ಯತೆ ಇದೆ. ಇಂತಹ ಕೃತ್ಯಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ~ ಎಂದ ನ್ಯಾಯಮೂರ್ತಿಗಳು ನ್ಯಾಯಾಂಗ ನಿಂದನೆಗೆ ಶಿಫಾರಸು ಮಾಡಿ, ಮುಂದಿನ ಕ್ರಮ ತೆಗೆದುಕೊಳ್ಳುವಂತೆ ರಿಜಿಸ್ಟ್ರಾರ್ ಅವರಿಗೆ ಆದೇಶಿಸಿದ್ದಾರೆ.

ಮುಂೀನು? ನ್ಯಾಯಾಂಗ ನಿಂದನೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸುವ ಪೀಠಕ್ಕೆ ಈ ಪ್ರಕರಣದ ವಿಚಾರಣೆಯನ್ನೂ ಒಪ್ಪಿಸಲಾಗುವುದು. ಅಲ್ಲಿ ವಾದ, ಪ್ರತಿವಾದಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.