ADVERTISEMENT

ಸೆರೆಸಿಕ್ಕ ಸೈಕೊ ಶಂಕರ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 11:02 IST
Last Updated 6 ಸೆಪ್ಟೆಂಬರ್ 2013, 11:02 IST

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಭಾನುವಾರ ಬೆಳಗಿನ ಜಾವ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದ `ಸೈಕೊ ಕಿಲ್ಲರ್' ಎಂಬ ಕುಖ್ಯಾತಿಯ ಜೈಶಂಕರ್ ಅಲಿಯಾಸ್ ಶಂಕರ್‌ನನ್ನು ಕೇಂದ್ರ ಅಪರಾಧ ವಿಭಾಗ ಮತ್ತು ನಗರ ಪೊಲೀಸ್ ಸಿಬ್ಬಂದಿ ಶುಕ್ರವಾರ ಕೂಡ್ಲುಗೇಟ್ ಬಳಿ ಬಂಧಿಸಿದ್ದಾರೆ.

ಕೊಲೆ, ಅತ್ಯಾಚಾರ ಸೇರಿದಂತೆ 30ಕ್ಕೂ ಹೆಚ್ಚು ಹೇಯ ಅಪರಾಧ ಪ್ರಕರಣಗಳ ಆರೋಪಿಯಾಗಿರುವ ಶಂಕರ್‌ನನ್ನು ಕಾರಾಗೃಹದ ಆರೋಗ್ಯ ವಿಭಾಗದ ಕೊಠಡಿ ಸಂಖ್ಯೆ 26ರಲ್ಲಿ ಇರಿಸಲಾಗಿತ್ತು. ಭಾನುವಾರ ರಾತ್ರಿ ಸುರಿದ ಮಳೆಯಿಂದ ವಿದ್ಯುತ್ ವ್ಯತ್ಯಯ ಉಂಟಾದ ಸಂದರ್ಭದಲ್ಲಿ ಶಂಕರ್‌ ನಕಲಿ ಕೀ ಬಳಸಿ ಬಾಗಿಲು ತೆರೆದು ಉದ್ಯಾನದಲ್ಲಿ ಬಳ್ಳಿ ಹಬ್ಬಿಸಲು ಗೋಡೆಗೆ ಒರಗಿಸಿಟ್ಟಿದ್ದ ಮರದ ಕಂಬದ ಸಹಾಯದಿಂದ 21 ಅಡಿ ಎತ್ತರದ ಗೋಡೆ ಏರಿ ಪರಾರಿಯಾಗಿದ್ದ.

ಬಿಗಿ ಭದ್ರತೆಯ ಈ ಜೈಲಿನ 16 ವರ್ಷಗಳ ಇತಿಹಾಸದಲ್ಲಿ ಕೈದಿಯೊಬ್ಬ ತಪ್ಪಿಸಿಕೊಂಡಿದ್ದ ಇದೇ ಮೊದಲು. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ಕಾರಾಗೃಹ ಇಲಾಖೆ, ಕರ್ತವ್ಯ ಲೋಪಕ್ಕಾಗಿ 11 ಸಿಬ್ಬಂದಿಯನ್ನು ಅಮಾನತು ಮಾಡಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.