ತುಮಕೂರು: ಧರ್ಮವನ್ನು ರಕ್ಷಿಸಬೇಕಾದ ಸ್ವಾಮೀಜಿಗಳು ಅಧರ್ಮದ ಹಾದಿ ಹಿಡಿದರೆ ಅವರ ವಿರುದ್ಧವೂ ಹೋರಾಟ ಅನಿವಾರ್ಯ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಎಚ್ಚರಿಸಿದರು.
‘ದೇವೇಗೌಡರ ಕುಟುಂಬ ರಾಜ್ಯಕ್ಕೆ ನೀಡಿರುವ ಕೊಡುಗೆ ಏನು’ ಎಂದು ಆದಿಚುಂಚನಗಿರಿ ಮಠಾಧೀಶರು ಕಾರ್ಯಕ್ರಮವೊಂದರಲ್ಲಿ ಪ್ರಶ್ನಿಸಿರುವುದಕ್ಕೆ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಸ್ವಾಮೀಜಿ ನಮ್ಮ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಮ್ಮ ಕುಟುಂಬದ ಕೊಡುಗೆ ರಾಜ್ಯದ ಜನತೆಗೆ ಗೊತ್ತಿದೆ. ಸ್ವಾಮೀಜಿಗಳ ನಡವಳಿಕೆ ಗಮನಿಸಿದ್ದೇವೆ. ಯಾವುದೇ ಸ್ವಾಮೀಜಿಗಳಿಂದ ನಮಗೆ ಪ್ರಮಾಣಪತ್ರ ಬೇಕಿಲ್ಲ. ಕೇವಲ ರೂ. 134 ಕೋಟಿಯ ವಿಕಾಸಸೌಧ ಕಟ್ಟುತ್ತಿದ್ದಾಗ ರಾಜ್ಯದಲ್ಲಿ ಎಷ್ಟು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡರು? ನಾನು ಮುಖ್ಯಮಂತ್ರಿಯಾದಾಗ ರಾಜ್ಯದ ರೈತರ ರೂ. 2500 ಕೋಟಿ ಸಾಲ ಮನ್ನಾ ಮಾಡಿದ್ದರಿಂದ ಆತ್ಮಹತ್ಯೆ ಪ್ರಮಾಣ ಎಷ್ಟು ಕಡಿಮೆಯಾಗಿದೆ ಎನ್ನುವ ಬಗ್ಗೆ ಮಾಹಿತಿ ಪಡೆದು ಸ್ವಾಮೀಜಿ ಮಾತನಾಡಲಿ ಎಂದು ಅವರು ಸವಾಲು ಹಾಕಿದರು.
‘ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಅನಿವಾರ್ಯ. ಯಡಿಯೂರಪ್ಪ ಎರಡೂವರೆ ವರ್ಷ ಕಾಲ ನಾನೇ ಮುಖ್ಯಮಂತ್ರಿ ಎಂಬುದಾಗಿ ಪದೇಪದೇ ನೀಡುತ್ತಿರುವ ಹೇಳಿಕೆಯಲ್ಲೇ ಅದರ ಮುನ್ಸೂಚನೆ ಇದೆ. ಹಾಗಾಗಿಯೇ ಕೇಂದ್ರಕ್ಕೂ ಮೊದಲೇ ರಾಜ್ಯದ ಬಜೆಟ್ ಮಂಡಿಸಿ ಕೇಂದ್ರ ಸರ್ಕಾರಕ್ಕೆ ಮಾರ್ಗದರ್ಶನ ನೀಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.