ಹಾವೇರಿ: ಜೈನ ಸಮುದಾಯ ಹಾಗೂ ಸಾಹಿತ್ಯದ ಬಗ್ಗೆ ಸಮಗ್ರ ಅಧ್ಯಯನ ಮಾಡಿರುವ ಡಾ.ಹಂ.ಪ.ನಾಗರಾಜಯ್ಯ ಅವರಿಗೆ ಅಮೆರಿಕದ ಜ್ಯುವೆಲ್ ಆಫ್ ಜೈನ್ ವರ್ಲ್ಡ್ (ಜೈನ ಜಗತ್ತಿನ ರತ್ನ) ಪ್ರಶಸ್ತಿಯನ್ನು ಬುಧವಾರ ಇಲ್ಲಿ ಪ್ರದಾನ ಮಾಡಲಾಯಿತು.
ಜಿಲ್ಲಾ ಜೈನ ಸಮುದಾಯ ಹಮ್ಮಿಕೊಂಡ ಪಂಚಕಲ್ಯಾಣ ಕಾರ್ಯಕ್ರಮದಲ್ಲಿ ಪ್ರಶಸ್ತಿ ಫಲಕ, ಸನ್ಮಾನ ಪತ್ರ ಹಾಗೂ ರೂ. 25,000 ನಗದು ಪುರಸ್ಕಾರ ಒಳಗೊಂಡ ಪ್ರಶಸ್ತಿಯನ್ನು ಡಾ. ಹಂಪನಾ ಅವರಿಗೆ ಅಟ್ಲಾಂಟಾ ಜೈನ್ ವರ್ಲ್ಡ್ ಫೌಂಡೇಷನ್ನ ಸುನೀಲ ಸೇನ್ ನೀಡಿ ಗೌರವಿಸಿದರು.
‘ಡಾ.ಹಂಪನಾ ಅವರು ಜೈನ ಜಗತ್ತಿನ ರತ್ನವಷ್ಟೇ ಅಲ್ಲ ಕನ್ನಡ ಸಾಹಿತ್ಯದ ರತ್ನವೂ ಆಗಿದ್ದಾರೆ. ಅವರಿಗೆ ಜೈನ ಸಮುದಾಯ ಕೊಡಮಾಡುವ ಅಂತರರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ’ ಎಂದು ಪ್ರೊ. ಹಿ.ಚಿ.ಬೋರಲಿಂಗಯ್ಯ ಹೇಳಿದರು.
‘53 ವರ್ಷಗಳಿಂದ ಜೈನ ಸಮುದಾಯದ ಒಳ, ಹೊರವುಗಳ ಬಗ್ಗೆ ಅಧ್ಯಯನ ನಡೆಸಲು ಈ ನಾಡಿನ ಜೈನ ಸಮುದಾಯದ ಸಹಕಾರ ಬಹಳಷ್ಟಿದೆ. ಈ ಪ್ರಶಸ್ತಿಯು ನನಗೆ ಮತ್ತಷ್ಟು ಕೆಲಸ ಮಾಡಲು ಸ್ಫೂರ್ತಿ ಹಾಗೂ ಚೈತನ್ಯ ನೀಡಲಿದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಡಾ.ಹಂಪನಾ ಹೇಳಿದರು.
‘ವ್ಯವಹಾರಕ್ಕೆ ಮಾತ್ರ ಸಿಮೀತವಾಗಿದ್ದ ಕನ್ನಡ ಭಾಷೆಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ರೂಪ ಕೊಟ್ಟ ಶ್ರೇಯಸ್ಸು ಜೈನ ಸಮುದಾಯಕ್ಕೆ ಸಲ್ಲುತ್ತದೆ. ಕನ್ನಡ ಭಾಷಾ ಮಾಧ್ಯಮ ಕುರಿತು ಸುಪ್ರೀಂ ಕೋರ್ಟ್ನ ನಿರ್ಧಾರ ರಾಜ್ಯಕ್ಕೆ ಮಾರಕವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಾಹಿತಿಗಳು ಕನ್ನಡದ ಉಳಿವಿಗಾಗಿ ಸೂಕ್ತ ನಿರ್ಣಯ ತೆಗೆದುಕೊಳ್ಳುವುದು ಅವಶ್ಯವಾಗಿದೆ’ ಎಂದು ಅವರು ಆಗ್ರಹಿಸಿದರು.
ಸಾಹಿತಿಗಳಾದ ಕಮಲಾ ಹಂಪನಾ, ಸತೀಶ ಕುಲಕರ್ಣಿ ಪಾಲ್ಗೊಂಡಿದ್ದರು. ಮುನಿಶ್ರೀ ೧೦೮ ಪುಣ್ಯಸಾಗರ ಮಹಾರಾಜರು, ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.