ADVERTISEMENT

ಹತ್ತಿರವಿದ್ದೂ ದೂರ ಉಳಿದವರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ಶಿವಮೊಗ್ಗ: ನಗರದಲ್ಲಿ  ಶನಿವಾರ ನಡೆದ ನಗರದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಖಾಮುಖಿಯಾದರೂ ಆರಂಭದ ಕೆಲಕಾಲ ಇಬ್ಬರ ನಡುವೆ ಮಾತುಕತೆ ನಡೆಯಲಿಲ್ಲ.

ಕಾರ್ಯಕ್ರಮಕ್ಕೆ ತಡವಾಗಿ ಸೇರಿಕೊಂಡ ಯಡಿಯೂರಪ್ಪ, ಮುಖ್ಯಮಂತ್ರಿ ಕುಳಿತ ಸ್ಥಳದಿಂದ ಎರಡು ಕುರ್ಚಿ ಬಿಟ್ಟು ಕುಳಿತರು. ಯಡಿಯೂರಪ್ಪ ವೇದಿಕೆಗೆ ಬಂದ ತಕ್ಷಣ ಸದಾನಂದಗೌಡ ಅವರು ಯಡಿಯೂರಪ್ಪ ಅವರತ್ತ ನೋಡಿ ವಿಶ್ ಮಾಡಲು ಮುಂದಾದರೂ ಅವರು ಮಾತ್ರ ಇವರತ್ತ ನೋಡಲೇ ಇಲ್ಲ.

ಕಾರ್ಯಕ್ರಮದ ಮಧ್ಯದಲ್ಲಿ ಮುಖ್ಯಮಂತ್ರಿ ಅವರೇ ಎದ್ದು ಹೋಗಿ ಯಡಿಯೂರಪ್ಪ ಪಕ್ಕದ ಸೀಟಿನಲ್ಲಿ ಕ್ಷಣಕಾಲ ಕುಳಿತು ಫೋಟೋಕ್ಕೆ ಪೋಸ್ ನೀಡಿದರು. ಆದರೆ, ಇಬ್ಬರ ನಡುವೆ ಆತ್ಮೀಯ ಮಾತುಕತೆ ನಡೆಯಲಿಲ್ಲ.

ತಾವು ಮುಖ್ಯಮಂತ್ರಿ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳದಿದ್ದಕ್ಕೆ ತಮ್ಮ ಭಾಷಣದಲ್ಲಿ ಸ್ಪಷ್ಟನೆ ನೀಡಿದ ಯಡಿಯೂರಪ್ಪ, `ನಾನೊಬ್ಬ ಸಾಮಾನ್ಯ ಶಾಸಕ. ಮುಖ್ಯಮಂತ್ರಿ ಪಕ್ಕದಲ್ಲಿ ಸಂಸತ್ ಸದಸ್ಯರು, ಪಕ್ಷದ ರಾಜ್ಯಾಧ್ಯಕ್ಷರು ಕುಳಿತಿದ್ದರು. ಇದನ್ನೇ ನೀವು ನಾಳೆ ದೊಡ್ಡದು ಮಾಡಿ ಬರೆಯುತ್ತೀರಿ. ನಿಮ್ಮ ಆದ್ಯತೆಗಳು ಬದಲಾಗಬೇಕು~ ಎಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡರು.

`ಮನೆಯಲ್ಲಿ ನೋಡುವುದಿಲ್ಲವೇ?~:   ವಿಧಾನಸೌಧದಲ್ಲಿ ಬ್ಲೂಫಿಲಂ ವೀಕ್ಷಣೆ ಪ್ರಕರಣದಲ್ಲಿ ಮಾಧ್ಯಮಗಳ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಯಡಿಯೂರಪ್ಪ, `ಕೆಲವರು ಆಕಸ್ಮಿಕವಾಗಿ ನೋಡಿರಬಹುದು. ಹಾಗಂತ ಎಲ್ಲ ಎಂಎಲ್‌ಎಗಳೂ ಇದನ್ನೇ ಮಾಡುತ್ತಾರೆಯೇ? ಅವರು ಮನುಷ್ಯರು ತಾನೇ? ಒಂದು ಕ್ಷಣ ನೋಡಿದ್ದನ್ನು ವಾರಗಟ್ಟಲೇ ತೋರಿಸಿದ್ದು ಸರಿಯೇ? ನೀವು ಮನೆಯಲ್ಲಿ ನೋಡುವುದಿಲ್ಲವೇ?~ ಎಂದು ಪತ್ರಕರ್ತರನ್ನು ನೇರವಾಗಿ ಪ್ರಶ್ನಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.