ADVERTISEMENT

ಹರ್ಷ ಮೊಯಿಲಿಗೆ ಅರ್ಹತೆ ಇರಲಿಲ್ಲ

ಚುನಾವಣಾಧಿಕಾರಿ ಪ್ರಮೋದ್‌ ಕುಮಾರ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆ­ಯಲ್ಲಿ ಕಾಂಗ್ರೆಸ್‌ ಪಕ್ಷದ ಲೋಕಸಭಾ ಅಭ್ಯರ್ಥಿಯನ್ನು ಆರಿ­ಸುವ ಚುನಾವಣೆ­ಯಲ್ಲಿ ಹರ್ಷ ಮೊಯಿಲಿ ಅವರ ನಾಮ­­ಪತ್ರ ತಿರಸ್ಕೃತ­ಗೊಳ್ಳುವುದಕ್ಕೆ, ಅವರು ಸಮಾಜ ಸೇವೆಯ ಅರ್ಹತೆ­ಯನ್ನು ಪೂರೈಸದಿ­ರುವುದೇ ಕಾರಣ’ ಎಂದು ಚುನಾವಣಾ­ಧಿಕಾರಿ ಸ್ಪಷ್ಟಪಡಿಸಿ­ದ್ದಾರೆ. 

ಹರ್ಷ ಮೊಯಿಲಿ ಅವರ ನಾಮ­ಪತ್ರ ತಿರಸ್ಕಾರಗೊಂಡ ಗೊಂದಲ­ಗಳ ಕುರಿತು ಪ್ರತಿಕ್ರಿಯಿಸಿದ ಅವರು, ‘ಲೋಕಸಭಾ ಅಭ್ಯರ್ಥಿ ಆಯ್ಕೆಯ ಚುನಾವಣೆಗೆ ನಾಮಪತ್ರ ಸಲ್ಲಿಸು­ವವರು ಅಪರಾಧಿ ಹಿನ್ನೆಲೆ ಹೊಂದಿರ­ಬಾರದು. ಸಂಸದನಾಗುವುದಕ್ಕೆ ಬೇಕಾದ ಅರ್ಹತೆ ಹೊಂದಿರ­ಬೇಕು.

­ಕಾಂಗ್ರೆಸ್‌ ಪಕ್ಷದ ಸದಸ್ಯನಾಗಿ ಪಕ್ಷದ ಯಾವುದಾದರೂ ಘಟಕಗಳಲ್ಲಿ ಹುದ್ದೆ­ಯನ್ನು ಅಲಂಕರಿಸಿದವರು, ಶಾಸಕರು, ಸಂಸದರು, ಮಾಜಿ ಸಂಸದರು, ಮಾಜಿ ಶಾಸಕರು, ಮಾಜಿ ಅಥವಾ ಹಾಲಿ ಮೇಯರ್‌, ಮಾಜಿ ಅಥವಾ ಹಾಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಕಳೆದ ಲೋಕಸಭಾ ಅಥವಾ ರಾಜ್ಯಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ­ಗಳು ನಾಮಪತ್ರ ಸಲ್ಲಿಸಬಹುದು. ಪಕ್ಷದ ಕಾರ್ಯಕರ್ತರಲ್ಲದವರೂ ನಾಮಪತ್ರ ಸಲ್ಲಿಸಲು ಅವಕಾಶವಿದೆ.

ಆದರೆ, ಅವರು ಸಾರ್ವಜನಿಕ ಸೇವೆ ಅಥವಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರಬೇಕು ಹಾಗೂ ಬೇರೆ ಪಕ್ಷದ ಸದಸ್ಯರರಾಗಿರಬಾರದು. ಹರ್ಷ ಮೊಯಿಲಿ ಅವರು ಈ ವರ್ಗದ ಅಡಿಯಲ್ಲಿ ನಾಮಪತ್ರ ಸಲ್ಲಿಸಿದ್ದರು. ಈ ವರ್ಗದ ಅಡಿ ನಾಮಪತ್ರ ಸಲ್ಲಿಸುವುದಕ್ಕೆ ಬೇಕಾದ ಅರ್ಹತೆ­ಯನ್ನು ಅವರು ಹೊಂದಿಲ್ಲ ಎಂಬ ಕಾರಣ­ಕ್ಕಾಗಿ ಎಐಸಿಸಿಯು ಅವರ ನಾಮಪತ್ರ ತಿರಸ್ಕರಿಸಿದೆ’ ಎಂದು ಕಾಂಗ್ರೆಸ್‌ನ ಲೋಕಸಭಾ ಅಭ್ಯರ್ಥಿ ಆಯ್ಕೆ ಚುನಾವಣಾಧಿಕಾರಿ ಪ್ರಮೋದ್‌ ಕುಮಾರ್‌ ‘ಪ್ರಜಾ­ವಾಣಿ’ಗೆ ತಿಳಿಸಿದರು.

‘ಎಐಸಿಸಿ ನಿರ್ಧಾರ ಬೇಸರ ತಂದಿದೆ’
‘ಸಾರ್ವಜನಿಕ ಸೇವೆ/ ಸಾಮಾಜಿಕ ಕಾರ್ಯದ ಹಿನ್ನೆಲೆ ಅಡಿ ನಾಮಪತ್ರ ಸಲ್ಲಿಸಲು ಬೇಕಾದ ಅರ್ಹತೆಗಳನ್ನು ನಾನು ಹೊಂದಿದ್ದೆ. ನಾನು ಕಿಸಾನ್‌ ಸಭಾ ಟ್ರಸ್ಟ್‌ನ ಆಡಳಿತ ಮಂಡಳಿ ಸದಸ್ಯ ಹಾಗೂ ಕಾರ್ಯದರ್ಶಿಯಾಗಿದ್ದೇನೆ. ಬಡ­ವರ್ಗದ ಮಕ್ಕಳಿಗೆ ಶಿಕ್ಷಣ ಒದಗಿಸುವ ಶಾಲೆಗಳನ್ನು ನಡೆಸಲು  ಈ ಟ್ರಸ್ಟ್‌ ಅನ್ನು ಆರಂಭಿಸಲಾಗಿದೆ.

ಗ್ರಾಮೀಣ ಪ್ರದೇಶದ ಹೈನುಗಾರರ ಸಬಲೀಕರಣ­ಕ್ಕಾಗಿ ದುಡಿಯುವ ಮೋಕ್ಷ ಯುಗ್‌ ಆಕ್ಸೆಸ್‌ ಇಂಡಿಯ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ­ಧಿಕಾರಿಯಾಗಿಯೂ ನಾನು ಕಾರ್ಯನಿರ್ವ­ಹಿಸುತ್ತಿದ್ದೇನೆ. ಆದರೂ ಎಐಸಿಸಿ ನನ್ನ ನಾಮಪತ್ರವನ್ನು ತಿರಸ್ಕರಿಸಿರುವುದು ಬೇಸರ ತಂದಿದೆ’ ಎಂದು ಹರ್ಷ ಮೊಯಿಲಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.