ADVERTISEMENT

ಹಲ್ಮಿಡಿಗಿಂತ ಹಳೆ ಶಾಸನ!

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2014, 19:30 IST
Last Updated 17 ಫೆಬ್ರುವರಿ 2014, 19:30 IST

ಶಿರಾಳಕೊಪ್ಪ (ಶಿವಮೊಗ್ಗ): ಕನ್ನಡದ ಪ್ರಥಮ ಶಾಸನ ಎಂದೇ ಪ್ರಚಲಿತ­ವಾಗಿ­ರುವ ಹಲ್ಮಿಡಿ ಶಾಸನ­ಕ್ಕಿಂತಲೂ ಪ್ರಾಚೀನ ಶಾಸನವೊಂದು ಶಿವಮೊಗ್ಗ ಜಿಲ್ಲೆಯ ತಾಳಗುಂದದಲ್ಲಿ ಪತ್ತೆಯಾಗಿದೆ.

‘ಪತ್ತೆಯಾಗಿರುವ ಈ ಶಿಲಾ ಶಾಸನ­ದಲ್ಲಿ ಕೆಲ ಕನ್ನಡ ಪದಗಳನ್ನು ಗುರುತಿಸ­ಲಾಗಿದ್ದು, ಹೆಚ್ಚಿನ ಅಧ್ಯಯನ ನಡೆಯು­ತ್ತಿದೆ’ ಎಂದು ಭಾರತೀಯ ಪುರಾತತ್ವ ಇಲಾಖೆಯ ರಾಜ್ಯ ಉಪ ನಿರೀಕ್ಷಕ ಕೇಶವ ಶರ್ಮ ಮಾಹಿತಿ ನೀಡಿದರು. 

ಕದಂಬ ಸಾಮ್ರಾಜ್ಯ ಸ್ಥಾಪಕ ಮಯೂರ ವರ್ಮನ ನೆಲೆಬೀಡಾಗಿದ್ದ ತಾಳಗುಂದದ ಗರ್ಭ­ದಲ್ಲಿ ಹುದುಗಿರುವ ಇತಿಹಾಸದ ಮೇಲೆ ಇನ್ನಷ್ಟು ಬೆಳಕು ಚೆಲ್ಲಲು ಹಲವು ತಿಂಗಳಿಂದ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆ ಉತ್ಖನನ ಕಾರ್ಯ ಕೈಗೊಂಡಿತ್ತು.

ಮೊದಲ ಬಾರಿ ನಡೆದ ಪ್ರಾಯೋಗಿಕ ಉತ್ಖನ­ನದಲ್ಲಿ ಇಲ್ಲಿನ ಪ್ರಣವ ಲಿಂಗೇಶ್ವರ ದೇವಾಲಯದ ಈಶಾನ್ಯ ಭಾಗದಲ್ಲಿ 2 ಜತೆ ತಾಮ್ರದ ಶಾಸನ ಹಾಗೂ 4 ಗ್ರಾಂ ತೂಕದ 13 ಚಿನ್ನದ ನಾಣ್ಯಗಳು ದೊರಕಿದ್ದವು. ಈ ನಾಣ್ಯ­ಗಳು ಕ್ರಿ.ಶ.  605 ರಿಂದ 635ರವರೆಗೆ ತಾಳಗುಂದವನ್ನು ಆಳಿದ ಭೂ­ವಿಕ್ರಮ­ನದು ಎಂದು ಗುರುತಿಸ­ಲಾಗಿದೆ.

ಇದರಲ್ಲಿ ಆನೆ ಹಾಗೂ ಗಂಗ ಅರಸರ ಚಿತ್ರಗಳನ್ನು ಕಾಣ­ಬಹುದಾಗಿದೆ. ತಾಮ್ರದ ಶಾಸನಗಳು ಕ್ರಿ.ಶ. 1180ರ  ಖಳಚೂರಿ ಸಂಕಮನದು ಎನ್ನಲಾಗಿದೆ. ಇದರಿಂದ ಇನ್ನಷ್ಟು ಉತ್ತೇಜಿತರಾದ ಪುರಾ­ತತ್ವ ಇಲಾಖೆ ಅಧಿಕಾರಿಗಳು ಎರಡನೇ ಬಾರಿಗೆ ಉತ್ಖನನ ಕಾರ್ಯಕ್ಕೆ ಕೈ ಹಾಕಿದ್ದು ಸಾಕಷ್ಟು ಉಪಯುಕ್ತ  ಮಾಹಿತಿ ಲಭ್ಯವಾಗಿದೆ.

ಕಲ್ಲಿನ ಶಾಸನದ ಜತೆ ಈಗ ಪತ್ತೆ­ಯಾ­ಗಿರುವ ಮುಖಮಂಟಪದ ಬಳಿಯ ಸಿಂಹ ಖಟಾಂಜನವು ಇತಿಹಾಸ ಅಧ್ಯಯ­ನದ ಬಹುಮುಖ್ಯ ಭಾಗ ಎಂದು ಗುರುತಿಸಲಾಗಿದೆ. 

ಉತ್ಖನನ ಕಾರ್ಯದಲ್ಲಿ 6 ಬಗೆಯ ಹೆಂಚು­ಗಳು ಲಭ್ಯವಾಗಿದ್ದು, 40x20x8 ಹಾಗೂ 20x20x8 ಸೆ.ಮೀ. ಅಳತೆಯ ಇಟ್ಟಿಗೆಗಳು ಸಹ ದೊರಕಿವೆ.

‘ಶಾತವಾಹನರ ಕಾಲದಿಂದ ಈ ಸ್ಥಳ ಅಗ್ರಹಾರ­ವಾಗಿತ್ತು. ನಂತರ ಕದಂಬರ ಕಾಲದಲ್ಲಿ ಉನ್ನತ ಸ್ಥಿತಿಗೆ ತಲುಪಿತ್ತು. ಎರಡನೇ ಉತ್ಖನನ ಕಾರ್ಯ­ದಲ್ಲಿ  ಹಲವು ಉಪ ಕಟ್ಟಡಗಳು ಕಾಣುತ್ತಿದ್ದು, ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ’ ಎಂದು ಶರ್ಮ ತಿಳಿಸಿದರು.

ಪ್ರಾಯೋಗಿಕ ಉತ್ಖನನ ಕಾರ್ಯ ಭಾರತೀಯ ಪುರಾತತ್ವ ಇಲಾಖೆಯ ರಾಜ್ಯ ಅಧೀಕ್ಷಕ ಡಾ.­ನಂಬಿರಾಜನ್ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.
–ಎಂ.ನವೀನ್ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.