ಮೈಸೂರು: ‘ಹನುಮ ಜಯಂತಿಯಂತಹ ಕಾರ್ಯಕ್ರಮಗಳು ಸಂಘಪರಿವಾರದಿಂದ ಪ್ರಾಯೋಜಿತ. ಜಯಂತಿಗಳ ಹೆಸರಿನಲ್ಲಿ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಹುಣಸೂರಿನಲ್ಲಿ ರಾಜಕೀಯ ಲಾಭ ಗಿಟ್ಟಿಸಿಕೊಳ್ಳುವ ಉದ್ದೇಶ ಬಿಜೆಪಿಗೆ ಇದೆ’ ಎಂದು ವಿವಿಧ ಪ್ರಗತಿಪರ ಸಂಘಟನೆ ಮುಖಂಡರು ಬುಧವಾರ ಆರೋಪಿಸಿದ್ದಾರೆ.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ.ಮಲ್ಲೇಶ್, ದಲಿತ–ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ವೇದಿಕೆಯ ಅಧ್ಯಕ್ಷ ಹರಿಹರಾನಂದ, ಅಖಿಲ
ಭಾರತ ಪ್ರಜಾವೇದಿಕೆ ಸಂಚಾಲಕ ವಿ.ಲಕ್ಷ್ಮಿನಾರಾಯಣ, ಸಿಪಿಎಂ ಮೈಸೂರು ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಬಸವರಾಜು, ಪಿಯುಸಿಎಲ್ ಮೈಸೂರು ಘಟಕದ ಅಧ್ಯಕ್ಷೆ ಇ.ರತಿರಾವ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ
ತಿಳಿಸಿದ್ದಾರೆ.
ದೇವರಾಜ ಅರಸು ಅವರ ಕಾಲದಿಂದಲೂ ಹುಣಸೂರು ತಾಲ್ಲೂಕು ಶಾಂತಿ ಸೌಹಾರ್ದತೆಗೆ ಹೆಸರಾಗಿದೆ. ತಾಲ್ಲೂಕಿನಲ್ಲಿ ಅಲ್ಪಸಂಖ್ಯಾತರು ಕಡಿಮೆ ಸಂಖ್ಯೆಯಲ್ಲಿದ್ದು, ಯಾವುದೇ ಪ್ರಚೋದನೆ ಮಾಡದಿದ್ದರೂ ಅವರ ವಿರುದ್ಧ ಮತೀಯ ದ್ವೇಷ ಕೆರಳಿಸುವ ಕೃತ್ಯಗಳನ್ನು ಸಂಘಪರಿವಾರದವರು ಮಾಡುತ್ತಿರುವುದು ಖಂಡನೀಯ ಎಂದಿದ್ದಾರೆ.
ಹುಣಸೂರಿನಲ್ಲಿ ಕೋಮು
ಸೌಹಾರ್ದತೆ ಉಳಿಸಿಕೊಳ್ಳಲು ಪ್ರಜಾಪ್ರಭುತ್ವವಾದಿಗಳು, ದಲಿತ ಸಂಘಟನೆಗಳು ಮತ್ತು ಪ್ರಗತಿಪರರು ಕೈಜೋಡಿಸಬೇಕು. ಕೋಮು ಸಂಘರ್ಷಕ್ಕೆ ಪ್ರತಿರೋಧ ಸಂಘಟಿಸಬೇಕು. ಇಲ್ಲೊಂದು ಕರಾವಳಿ ಸೃಷ್ಟಿಯಾಗುವುದನ್ನು ತಪ್ಪಿಸಬೇಕು ಎಂದು ಅವರು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.