ADVERTISEMENT

ಹೈಕೋರ್ಟ್‌ಗೆ ಹೊಸ ಅತಿಥಿ!

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಬೆಂಗಳೂರು: ಮುಖ್ಯ ನ್ಯಾಯಮೂರ್ತಿಗಳು ಕಲಾಪ ನಡೆಸುವ ಹೈಕೋರ್ಟ್ ಸಭಾಂಗಣಕ್ಕೆ ಬೆಳಿಗ್ಗೆ 10.30ಕ್ಕೆ ವಕೀಲರು ಆಗಮಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು. ಕಾರಣ, ದಿನವೂ ಕಲಾಪ ನಡೆಸುವ ಇಬ್ಬರು ನ್ಯಾಯಮೂರ್ತಿಗಳ ವಿಭಾಗೀಯ ಪೀಠದ ಜೊತೆ ಹೊಸ ನ್ಯಾಯಮೂರ್ತಿಯೊಬ್ಬರು ಕುಳಿತಿದ್ದರು!

ನಂತರ ಇವರು ಸ್ಲೊವೇನಿಯಾ ದೇಶದ ನ್ಯಾಯಮೂರ್ತಿ ಪ್ರೊ.ಡಾ.ಅರ್ನೆಸ್ಟ್ ಪ್ಯಾಟ್ರಿಕ್ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಪರಿಚಯಿಸಿದರು.

ಭಾರತಕ್ಕೆ ಪ್ರವಾಸ ಬಂದಿರುವ ಇವರು, ರಾಜ್ಯಪಾಲ ಹಾಗೂ ಮುಖ್ಯ ನ್ಯಾಯಮೂರ್ತಿಯವರ ಆಮಂತ್ರಣದ ಮೇರೆಗೆ ಕೋರ್ಟ್‌ಗೂ ಭೇಟಿ ನೀಡಿದರು. ಸ್ಲೊವೇನಿಯಾದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ಕಲ್ಪನೆ ಇಲ್ಲದ ಹಿನ್ನೆಲೆಯಲ್ಲಿ ಆ ಬಗ್ಗೆ ಅವರು ಆಸಕ್ತಿ ತಾಳಿದ್ದರು. ಈ ಹಿನ್ನೆಲೆಯಲ್ಲಿ ಎರಡು ಪಿಐಎಲ್‌ಗಳ ವಿಚಾರಣೆಯನ್ನು ಅವರು ನಡೆಸಿದರು.

ಮಂತ್ರಿಸ್ಕ್ವೇರ್ ಕಟ್ಟಡದ  ರ‌್ಯಾಂಪ್ ಹಾಗೂ ಕೋರಮಂಗಲದ ಬಳಿ ಜಮೀನಿನ ವಿವಾದಕ್ಕೆ ಸಂಬಂಧಿಸಿದ ಪಿಐಎಲ್‌ಗಳ ವಾದ, ಪ್ರತಿವಾದವನ್ನು ಕುತೂಹಲದಿಂದ ಸುಮಾರು ಅರ್ಧ ಗಂಟೆ ಕಾಲ ಅವರು ಆಲಿಸಿದರು. ವಕೀಲರಿಗೆ ಕೆಲವೊಂದು ಪ್ರಶ್ನೆಗಳನ್ನೂ ಕೇಳಿದರು.

ನಂತರ ಕೋರ್ಟ್‌ನಲ್ಲಿ ಹಾಜರು ಇದ್ದ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರನ್ನು ಉದ್ದೇಶಿಸಿ ಪಿಐಎಲ್‌ನ ಮೂಲ, ಉದ್ದೇಶ ಇತ್ಯಾದಿಗಳ ಕುರಿತು ಪ್ರಶ್ನಿಸಿದರು.


ಅದಕ್ಕೆ ಆಚಾರ್ಯ ಅವರು ವಿವರಣೆ ನೀಡಿದರು. ಕೆಲವೊಂದು ಸಂದರ್ಭಗಳಲ್ಲಿ ಪಿಐಎಲ್ ದುರ್ಬಳಕೆ ಆಗುತ್ತಿರುವ ಕುರಿತಾಗಿಯೂ ಅವರು ವಿವರಿಸಿದರು. ಅಂತಹ ಸಂದರ್ಭಗಳಲ್ಲಿ ಕೋರ್ಟ್ ಏನು ಮಾಡುತ್ತದೆ, ಇದಕ್ಕೆ ಯಾವುದೇ ಶಿಕ್ಷೆ ಇಲ್ಲವೇ ಎಂದು ಪ್ರಶ್ನಿಸಿ ಉತ್ತರ ಪಡೆದರು.

ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಆಚಾರ್ಯ ಅವರು, `ಕೋರ್ಟ್ ಭಾರಿ ಪ್ರಮಾಣದ ದಂಡ ವಿಧಿಸುತ್ತದೆ. ಆದರೆ ಇದಕ್ಕೆ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇಲ್ಲ~ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT