ಬೆಂಗಳೂರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರನ್ನು ಅರಮನೆ ರಸ್ತೆಯಲ್ಲಿರುವ ಅವರ 'ಶಾಂತಿನಿವಾಸ'ದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಭೇಟಿ ಮಾಡಿದರು.
ಮುಖ್ಯ ನ್ಯಾಯಮೂರ್ತಿ ಜತೆ ಮಧ್ಯಾಹ್ನದ ಭೋಜನ ಮಾಡಿದ ಮುಖ್ಯಮಂತ್ರಿ, ಸುಮಾರು ಎರಡು ಗಂಟೆ ಮಾತುಕತೆ ನಡೆಸಿದರು. ಆದರೆ, ಯಾವ ವಿಷಯದ ಬಗ್ಗೆ ಚರ್ಚಿಸಿದರು ಎಂಬುದು ತಿಳಿದು ಬಂದಿಲ್ಲ.
'ಇದೊಂದು ಶಿಷ್ಟಾಚಾರದ ಭೇಟಿಯಾಗಿತ್ತು. ಈ ವೇಳೆ, ಕುಮಾರಸ್ವಾಮಿ ಅವರು ಹೈಕೋರ್ಟ್ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಶೀಘ್ರ ಗಮನ ಹರಿಸುವಂತೆ ದಿನೇಶ್ ಮಾಹೇಶ್ವರಿ ಅವರಿಗೆ ಮನವಿ ಮಾಡಿದರು' ಎಂದು ಮೂಲಗಳು ತಿಳಿಸಿವೆ.
ಹೈಕೋರ್ಟ್ನಲ್ಲಿ ನ್ಯಾಯಮೂರ್ತಿಗಳ ಮಂಜೂರು ಸಂಖ್ಯೆ ಒಟ್ಟು 62. ಸದ್ಯ 30 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ, ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಇದೇ 31ಕ್ಕೆ ನಿವೃತ್ತಿಯಾಗಲಿದ್ದಾರೆ. ಜೂನ್ 15ಕ್ಕೆ ನ್ಯಾಯಮೂರ್ತಿ ಬಿ. ಶ್ರೀನಿವಾಸೇಗೌಡ ನಿವೃತ್ತಿಯಾಗಲಿದ್ದು ಇದೇ ವರ್ಷದ ಸೆಪ್ಟೆಂಬರ್ 30ಕ್ಕೆ ನ್ಯಾಯಮೂರ್ತಿ ಆರ್.ಬಿ. ಬೂದಿಹಾಳ್ ನಿವೃತ್ತಿ ಆಗಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.