ಗುಲ್ಬರ್ಗ: ಎರಡು ದಿನಗಳ ಹಿಂದೆ ಆಲಿಕಲ್ಲು ಸಹಿತ ಮಳೆ ಸುರಿದಿದ್ದ, ಹೈದರಾಬಾದ್ ಕರ್ನಾಟಕದ ರಾಯಚೂರು, ಗುಲ್ಬರ್ಗ, ಯಾದಗಿರಿಯಲ್ಲಿ ಬುಧವಾರ ಮಧ್ಯರಾತ್ರಿ ಬಳಿಕ ಭಾರಿ ಮಳೆಯಾಗಿದೆ.
ರಾಯಚೂರು ವರದಿ: ರಾಯಚೂರು ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವ ಸತತ ಐದು ತಾಸು ಹಾಗೂ ಮಧ್ಯಾಹ್ನ ಸುರಿದ ಅಕಾಲಿಕ ಮಳೆ ರೈತರಿಗೆ ಸಂಕಷ್ಟ ತಂದಿದೆ.
ರಾಯಚೂರು, ದೇವದುರ್ಗ, ಲಿಂಗಸುಗೂರು, ಮಾನ್ವಿ ತಾಲ್ಲೂಕುಗಳಲ್ಲಿ ಗುರುವಾರ ಬೆಳಿಗ್ಗೆ ವ್ಯಾಪಕ ಮಳೆ ಸುರಿದಿದೆ. ಹತ್ತಿ, ಮೆಣಸಿನಕಾಯಿ, ಜೋಳ, ಕಡಲೆ ಬೆಳೆದ ರೈತರ ಬೆಳೆ ನಷ್ಟಕ್ಕೆ ಕಾರಣವಾಗಿದೆ. ಮಾವು, ಚಿಕ್ಕು ಗಿಡಗಳೂ ಧಾರಾಕಾರ ಮಳೆ, ಗಾಳಿಗೆ ಹಾನಿಗೀಡಾಗಿವೆ.
ಹತ್ತಿ ಬೆಳೆಗೆ ಹಾನಿಯಾಗಿದ್ದು, ಕೊಯ್ಲು ಮಾಡಿ ಗುಡ್ಡೆ ಹಾಕಿದ್ದ ಜೋಳ ತೊಯ್ದು ಹೋಗಿದೆ. ಮೆಣಸಿನ ಕಾಯಿ ಹಣ್ಣಾಗಿದ್ದು, ಮಳೆಗೆ ತೊಯ್ದು ಕಪ್ಪಿಟ್ಟಿದೆ.
ಯಾದಗಿರಿ ವರದಿ: ಯಾದಗಿರಿ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ಸುರಿದ ಅಕಾಲಿಕ ಮಳೆಗೆ ಬೆಳೆ ಹಾನಿಯಾಗಿದ್ದು, ಮನೆಗಳೂ ಭಾಗಶಃ ಕುಸಿದಿವೆ.
ಜಿಲ್ಲೆಯ ಯಾದಗಿರಿ ಹಾಗೂ ಶಹಾಪುರ ತಾಲ್ಲೂಕಿನಲ್ಲಿ ಅಪಾರ ಪ್ರಮಾಣ ಮಳೆ ಸುರಿದಿದೆ. ಭತ್ತ ಹಾಗೂ ಜೋಳದ ಬೆಳೆಗಳು ಸಂಪೂರ್ಣ ನೆಲಕಚ್ಚಿವೆ. ಯಾದಗಿರಿ ತಾಲ್ಲೂಕಿನಲ್ಲಿ ಭಾರಿ ಗಾಳಿ ಸಹಿತ ಸುರಿದ ಆಲಿಕಲ್ಲು ಮಳೆಯಿಂದ 200 ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 200 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿವೆ.
ಮಳೆಯಿಂದ ವರ್ತಕರಿಗೂ ಬಿಸಿ ಮುಟ್ಟಿದೆ. ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಬುಧವಾರ ಖರೀದಿ ಮಾಡಿ ರಾಶಿ ಹಾಕಿದ್ದ ಶೇಂಗಾ, ಸಂಪೂರ್ಣ ನೀರಿನಲ್ಲಿ ತೊಯ್ದಿದೆ.
ಶಹಾಪುರ ತಾಲ್ಲೂಕಿನ ಪಟ್ಟಣದಲ್ಲಿ 33 ಮಿ.ಮೀ ವಡಗೇರಾ-ದಲ್ಲಿ 60 ಮಿ.ಮೀ ಹಯ್ಯಾಳದಲ್ಲಿ- 66 ಮಿ.ಮೀ, ಹತ್ತಿಗೂಡೂರು-ದಲ್ಲಿ 49 ಮಿ.ಮೀ ಮಳೆ ಸುರಿದಿದೆ.
ಗುಲ್ಬರ್ಗ ವರದಿ: ಗುಲ್ಬರ್ಗ ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಬೆಳೆಹಾನಿ ಪ್ರಮಾಣ ಹೆಚ್ಚಾಗಿದೆ. ನಿರಂತರ ಮಳೆ ಸುರಿಯದಿದ್ದರೂ ಆಗಾಗ್ಗೆ ಭಾರಿ ಗಾಳಿ ಹಾಗೂ ಆಲಿಕಲ್ಲುಗಳಿಂದಾಗಿ ಹಾನಿ ಉಂಟಾಗಿದೆ.
ಕಲ್ಲಂಗಡಿ, ಟೊಮೆಟೊ ಹಾಗೂ ವಿವಿಧ ತರಕಾರಿ ಬೆಳೆಗಳು ಹಾಳಾಗಿದ್ದು, ದ್ರಾಕ್ಷಿ, ಪಪ್ಪಾಯಿ, ಹೂವು, ಹಣ್ಣಿನ ಗಿಡಗಳಿಂದ ಫಲ–ಪುಷ್ಪಗಳು ಉದುರಿ ಬಿದ್ದಿವೆ. ಜೋಳ, ಕುಸುಬಿ, ಗೋಧಿ ಹಾಗೂ ಕಡಲೆ ಹಾಗೂ ಹತ್ತಿ ಬೆಳೆಗಳು ನೆಲ ಕಚ್ಚಿವೆ. ಜಮೀನಿನಲ್ಲಿ ಗುಂಪು ಹಾಕಿದ್ದ ಜೋಳ, ಗೋಧಿ, ಕಡಲೆ ಬೆಳೆಗಳು ಹಾನಿಗೀಡಾಗಿವೆ.
ಆಳಂದ ತಾಲ್ಲೂಕಿನಲ್ಲಿ ಭಾರಿ ಆಲಿಕಲ್ಲು ಮಳೆ ಸುರಿದರೆ, ಚಿತ್ತಾಪುರ ಹಾಗೂ ಅಫಜಲಪುರ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸೋಮವಾರದಿಂದ ಅಕಾಲಿಕ ಮಳೆ ಸುರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.