ADVERTISEMENT

‘ಅಭಿವೃದ್ಧಿ ಹೆಸರಲ್ಲಿ ಸಂಸ್ಕೃತಿ ನಾಶ ಬೇಡ’

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:47 IST
Last Updated 19 ಡಿಸೆಂಬರ್ 2013, 19:47 IST

ಮೂಡುಬಿದಿರೆ: ಜಾಗತೀಕರಣದ ಹೆಸರಲ್ಲಿ ನಮ್ಮ ಕಲೆ, ಸಂಸ್ಕೃತಿ, ಪರಿಸರ ನಾಶವಾಗಬಾರದು. ಅಭಿವೃದ್ಧಿ ಚಿಂತನೆಯ ಹಿಂದೆ ನಮ್ಮ ನೆಲದ ಗುಣವನ್ನು ಪೋಷಿಸುವ ಉದ್ದೇಶ ಇರಬೇಕು. ಸಮ್ಮೇಳನಗಳು ಇಂತಹ ಸಂದೇಶವನ್ನು ಜನತೆಗೆ ನೀಡುವಂ ತಾಗಬೇಕು ಎಂಬ ಸಂದೇಶದೊಂದಿಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗುರುವಾರ ಸಂಜೆ ಇಲ್ಲಿನ ವಿದ್ಯಾಗಿರಿಯಲ್ಲಿ ಆರಂಭವಾಯಿತು.

ಸಮ್ಮೇಳನ ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಈ ಸಂದೇಶ ನೀಡಿದರು. ಎರಡು ಮಹಾಯುದ್ಧಗಳಿಂದ ಜಗತ್ತಿನಲ್ಲಿ ಅಶಾಂತಿಯ ಬಿಸಿ ತಟ್ಟಿತ್ತು. ಇಂತಹ ಅಶಾಂತಿಯ ಮನಸ್ಸಿಗೆ ಶಾಂತಿ ನೀಡುವ ಶಕ್ತಿ ಇರುವುದು ಸಂಗೀತ, ನೃತ್ಯಗಳಂತಹ ಕಲೆಗಳಿಗೆ ಮಾತ್ರ. ಮನುಷ್ಯರ ನಡುವಿನ ದ್ವೇಷವನ್ನು ನಿವಾರಿಸುವುದಕ್ಕೆ ಇರುವ ಮಾರ್ಗವೆಂದರೆ ಕುವೆಂಪು ಅವರು ನೀಡಿದ ವಿಶ್ವಮಾನವ ಸಂದೇಶಗಳಂತಹ ಸಾರ್ವಕಾಲಿಕ ಸತ್ಯಗಳು. ಸಾಹಿತ್ಯ-, ಸಂಸ್ಕೃತಿಯ ಮನೋಭಾವವನ್ನು ಬೆಳೆಸಿ ಜನರಲ್ಲಿ ವಿಶ್ವಶಾಂತಿ, ಸೋದರತೆ ಬೆಳೆಸುವ ಪ್ರಯತ್ನವನ್ನು ಇಂತಹ ಸಮ್ಮೇಳನಗಳು ಮಾಡುತ್ತಿವೆ ಎಂದರು.

ಕನ್ನಡ ಎಂದರೆ ಅದು ಕೃಷಿ, ಜನಪದ, ನೆಲ, ಜಲ, ಸಂಸ್ಕೃತಿ ಎಲ್ಲವೂ. ಇವುಗಳಿಗೆ ಯಾವುದಕ್ಕೂ ನ್ಯೂನತೆ ಉಂಟಾ ಗಬಾರದು. ಅಭಿವೃದ್ಧಿಯ ಹೆಸರಲ್ಲಿ ಪರಿಸರ ನಾಶ ಸಲ್ಲದು. ಜಾಗತೀಕರಣದ ಹೆಸರಲ್ಲಿ ನಮ್ಮ ಸಂಸ್ಕೃತಿಯನ್ನು ಮರೆಯುವುದೂ ಕೂಡದು ಎಂಬ ಎಚ್ಚರಿಕೆಯನ್ನು ನೀಡುವ ಮಹಾನ್ ಕೆಲಸವನ್ನು ಆಳ್ವಾಸ್ ನುಡಿಸಿರಿ ವಿರಾಸತ್ ಮಾಡುತ್ತಿದೆ ಎಂದು ಅವರು ಹೇಳಿದರು.

‘ಕನ್ನಡ ಮನಸ್ಸು- ಅಂದು- ಇಂದು- ಮುಂದು’ ಎಂಬ ಆಶಯದೊಂದಿಗೆ ಈ ವಿಶ್ವ ನುಡಿಸಿರಿಯನ್ನು ಆಯೋಜಿಸ ಲಾಗಿದ್ದು, ಸರ್ವಾಧ್ಯಕ್ಷ ಡಾ.ಬಿ.ಎ.ವಿವೇಕ ರೈ ಅವರು ಸಹ ಇದೇ ಆಶಯ ವ್ಯಕ್ತಪಡಿಸಿದರು. ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಕನ್ನಡವನ್ನು ಜಗತ್ತಿನ ಮೂಲೆ ಮೂಲೆಗೆ ಸಾಗಿಸಬೇಕಾದ ಅನಿವಾರ್ಯತೆ ಮತ್ತು ಅದನ್ನು ಸಾಧಿಸಬಹುದಾದ ಮಾರ್ಗಗಳ ಮೇಲೆ ಅವರು ಬೆಳಕು ಚೆಲ್ಲಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ತಮ್ಮ ಈ ಸಾಹಿತ್ಯ, ಸಾಂಸ್ಕೃತಿಕ ಪ್ರಯತ್ನದಲ್ಲಿ ಹುಳುಕು ಹುಡುಕುವ ಮನೋಭಾವ ಬೆಳೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ‘ಸರ್ಕಾರದ ಹಣ ಪಡೆದು ಅದನ್ನು ದುರುಪಯೋಗ ಮಾಡಿಲ್ಲ, ಪ್ರೀತಿಯಿಂದ ಜನರು ಕೊಟ್ಟ ಹಣದಿಂದಲೇ ಸಮ್ಮೇಳನ ಮಾಡುತ್ತಿ ದ್ದೇನೆ. ಸಮ್ಮೇಳನ ಮಾಡುತ್ತಿ ರುವು ದರಿಂದ ನಾನು ದೊಡ್ಡ ಸಾಲಗಾ ರನಾಗಿದ್ದೇನೆ, ಆದರೂ ಮುಂದೆಯೂ ಈ ಪ್ರಯತ್ನವನ್ನು ಮುಂದುವ ರಿಸುತ್ತೇನೆ. ಕನ್ನಡ ಸೇವೆಗಾಗಿ ಇತರರು ಬೇಕಾದ ರೀತಿಯಲ್ಲಿ ಸಮ್ಮೇಳನಗಳನ್ನು ನಡೆಸಲಿ, ಅವರ್‍ಯಾರಿಗೂ ನಾನು ಸ್ಪರ್ಧಿ ಅಲ್ಲ’ ಎಂದು ಅವರು ಭಾವುಕರಾಗಿ ನುಡಿದರು.

ಕಳೆದ 9 ನುಡಿಸಿರಿಗಳ ಅಧ್ಯಕ್ಷತೆ ವಹಿಸಿದ್ದ ಡಾ.ಬರಗೂರು ರಾಮಚಂದ್ರಪ್ಪ, ಡಾ.ಎಸ್. ಎಲ್.ಭೈರಪ್ಪ, ಡಾ.ಚಂದ್ರಶೇಖರ ಕಂಬಾರ, ಪ್ರೊ.ಜಿ.ವೆಂಕಟಸುಬ್ಬಯ್ಯ, ಡಾ.ಚನ್ನವೀರ ಕಣವಿ, ಡಾ.ಹಂಪ ನಾಗರಾಜಯ್ಯ, ವೈದೇಹಿ, ಕೆ.ಎಸ್. ನಿಸಾರ್ ಅಹ್ಮದ್ ಅವರನ್ನು ಸನ್ಮಾನಿ ಸಲಾಯಿತು. ಡಾ.ಎಂ.ಎಂ. ಕಲಬುರ್ಗಿ ಅವರು ಅಸೌಖ್ಯದ ಕಾರಣ ಬಂದಿ ರಲಿಲ್ಲ.

ಜ್ಞಾನಾರ್ಜನೆ, ದೃಶ್ಯ ಕಾವ್ಯಕ್ಕೆ ವೇದಿಕೆ ಸಜ್ಜು: ನುಡಿಸಿರಿಯ ವಿದ್ವತ್ಪೂರ್ಣ ಗೋಷ್ಠಿಗಳು ಶುಕ್ರವಾರದಿಂದ ಆರಂಭವಾ ಗಲಿದ್ದು, ವಿದ್ಯಾರ್ಥಿ ಸಿರಿ, ಕೃಷಿ ಸಿರಿ ಎಂಬ ವಿಶಿಷ್ಟ ಕಾರ್ಯಕ್ರಮಗಳು ತೆರೆದುಕೊಳ್ಳಲಿವೆ. ವಿರಾಸತ್ ಎಂಬ ಸಾಂಸ್ಕೃತಿಕ ಲೋಕವೂ ಶುಕ್ರವಾರ ಸಂಜೆ ಮೈದಳೆಯಲಿದ್ದು, ನಾಲ್ಕು ವೇದಿಕೆಗಳಲ್ಲಿ ವಿವಿಧ ಗೋಷ್ಠಿಗಳು ಹಾಗೂ 9 ವೇದಿಕೆಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಶುಕ್ರವಾರದಿಂದ ಭಾನುವಾರದ ವರೆಗೆ ಜನರ ಮನತಣಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.