ADVERTISEMENT

‘ಪಕ್ಷಗಳಿಗೆ ಬದ್ಧರಾಗುವ ದುರ್ಗತಿ ಸಾಹಿತಿಗಳಿಗಿಲ್ಲ’

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 9 ಜನವರಿ 2016, 19:35 IST
Last Updated 9 ಜನವರಿ 2016, 19:35 IST

ಬೆಂಗಳೂರು: ‘ಎಲ್ಲವನ್ನು ಕ್ಷುಲ್ಲಕ ರಾಜಕಾರಣಕ್ಕೆ ಇಳಿಸಿ ಈ ಪಕ್ಷದ ಪರವಾಗಿ, ಆ ಪಕ್ಷದ ಪರವಾಗಿ ಸಾಹಿತಿಗಳನ್ನು ನೋಡುವುದು ಬಹಳ ಅಸಹ್ಯ, ಅವಮಾನದ ವಿಷಯ’ ಎಂದು ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ‘ಗೌರವ ಪ್ರಶಸ್ತಿ– 2013, ಪುಸ್ತಕ ಬಹುಮಾನ ಹಾಗೂ ಅಕಾಡೆಮಿ ದತ್ತಿನಿಧಿ ಬಹುಮಾನ– 2012’ ಪ್ರದಾನ ಸಮಾರಂಭದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಸೂಕ್ಷ್ಮ ಮನಸ್ಸಿನ ಬರಹಗಾರನಿಗೆ ರಾಜಕೀಯ ಪಕ್ಷಕ್ಕೆ ಬದ್ಧನಾಗುವ ದುರ್ಗತಿ ಬರುವುದಿಲ್ಲ. ಬರಹಗಾರರಿಗೆ ಲೋಕದ ಹಂಗಿದೆ. ಅನ್ಯಾಯದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಾರೆ.  ಹಾಗೆಯೇ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಾಗ ಅದರ ವಿರುದ್ಧವೂ ದನಿ ಎತ್ತುತ್ತಾರೆ’ ಎಂದರು.

ಪ್ರಶಸ್ತಿ ಪ್ರದಾನ ಮಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ರಾಜಕೀಯ ವಲಯದಲ್ಲಿ ಇದ್ದ ಬಾಯಿಬಾಕತನ ಅಕಡೆಮಿಕ್‌ ವಲಯ ಪ್ರವೇಶ ಮಾಡಿದೆ. ಆರ್ಥಿಕ ವಲಯದ ಕೊಳ್ಳುಬಾಕತನ ಹಾಗೂ ಬಾಯಿಬಾಕತನ ಸೇರಿ ಇಡೀ ವಾತಾವರಣವನ್ನು ವಿಷಮಯಗೊಳಿಸುತ್ತಿವೆ. ಇದರಿಂದ ವಿಮರ್ಶೆಯ ವಿವೇಕಕ್ಕೆ ವಿಷಪ್ರಾಶನ ವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬಂಗಾಳಿ ಕವಿ ಡಾ.ಸುಬೋಧ್‌ ಸರ್ಕಾರ್‌ ಮಾತನಾಡಿ, ‘ಕನ್ನಡ ಹಾಗೂ ಬಂಗಾಳಿ ಭಾಷೆಯ ಕೃತಿಗಳನ್ನು ಅನುವಾದ ಮಾಡಬೇಕು. ಇದಕ್ಕಾಗಿ ಕನ್ನಡದ ಮೂವರು ಲೇಖಕರನ್ನು ಕೋಲ್ಕತ್ತ ಹಾಗೂ ಬಂಗಾಳಿಯ ಮೂವರು ಲೇಖಕರನ್ನು ಬೆಂಗಳೂರಿಗೆ ಕಳುಹಿಸಿ ಅನುವಾದ ಮಾಡುವ ವ್ಯವಸ್ಥೆ ಆಗಬೇಕು’ ಎಂದರು.

₹10 ಸಾವಿರ ದೇಣಿಗೆ: ಅಸಹಿಷ್ಣುತೆ ವಿರುದ್ಧ ಕಾರ್ಯಕ್ರಮ ಹಮ್ಮಿಕೊಳ್ಳುವ ಉದ್ದೇಶದಿಂದ ಸಾಹಿತ್ಯ ಅಕಾಡೆಮಿಗೆ ಚಲನಚಿತ್ರ ನಿರ್ದೇಶಕ ಬಿ.ಸುರೇಶ ಅವರು ₹10 ಸಾವಿರ ದೇಣಿಗೆ ನೀಡಿದರು.

ಖರ್ಚು ಉಳಿಯುತ್ತಿತ್ತು: ‘ಅಕಾಡೆಮಿ ಗೌರವ ಸ್ವೀಕರಿಸುವವರ ಹೆಸರಿನಲ್ಲಿ ಸಾವಿರಾರು ರೂಪಾಯಿ ವ್ಯಯ ಮಾಡಲಾಗುತ್ತದೆ. ಫಲಕ, ಪ್ರಮಾಣ ಪತ್ರ, ಫಲತಾಂಬೂಲ, ಶಾಲು  ಹೀಗೆ ಖರ್ಚುಗಳಿರುತ್ತದೆ. ಮೊದಲೇ ತಿಳಿಸಿದರೆ ಅಕಾಡೆಮಿಯ ಖರ್ಚು ಉಳಿಯುತ್ತದೆ. ಇದನ್ನೂ ಲೇಖಕರು ಗಮನದಲ್ಲಿಡಬೇಕು’ ಎಂದು ಮನವಿ ಮಾಡಿದ್ದಾರೆ.

ದಯಾನಂದ ಅವರು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿ, ಕಲಬುರ್ಗಿ ಹಂತಕರ ಪತ್ತೆ ವಿಳಂಬ ಪ್ರತಿಭಟಿಸಿ ಅಕಾಡೆಮಿಯ ಪುಸ್ತಕ ಬಹುಮಾನ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದರು.

ಬಹುಮಾನ ನಿರಾಕರಣೆ ಪ್ರಚಾರ ತಂತ್ರ
 ಬೆಂಗಳೂರು: ‘ಲೇಖಕ ಟಿ.ಕೆ. ದಯಾನಂದ ಅವರು ಸಾಹಿತ್ಯ ಅಕಾಡೆಮಿಯ ಬಹುಮಾನ ಸ್ವೀಕರಿಸಲು ನಿರಾಕರಿಸಿ ಪ್ರಶಸ್ತಿ ಪ್ರದಾನ ಸಮಾರಂಭದ ಮುನ್ನಾದಿನ ಪತ್ರಿಕೆಗಳಿಗೆ ಹೇಳಿಕೆ ನೀಡಿರುವುದು ಕೇವಲ  ಪ್ರಚಾರ ತಂತ್ರ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು, ‘ಪ್ರಶಸ್ತಿ 2015 ಸೆಪ್ಟೆಂಬರ್‌ 19ರಂದು ಘೋಷಣೆಯಾಗಿದೆ. ಮೂರು ವಾರಗಳ ಹಿಂದೆ ಪ್ರಶಸ್ತಿ ಪ್ರದಾನ ಸಮಾರಂಭದ  ದಿನಾಂಕ ತಿಳಿಸಿ ಆಹ್ವಾನ ನೀಡಿದಾಗಲೂ ಸುಮ್ಮನಿದ್ದರು. 8 ದಿನಗಳ ಹಿಂದೆ ವ್ಯಕ್ತಿ ಪರಿಚಯ ಕೇಳಲಾಗಿತ್ತು. ಅದನ್ನೂ ಕಳುಹಿಸಿಕೊಟ್ಟಿದ್ದಾರೆ. ಆ ಸಂದರ್ಭದಲ್ಲೂ ಬಹುಮಾನ ನಿರಾಕರಿಸುತ್ತಿರುವ ವಿಚಾರ ತಿಳಿಸಿಲ್ಲ. ಆದರೆ, ಬಹುಮಾನ ಸ್ವೀಕರಿಸದಿರುವ ಬಗ್ಗೆ ಶುಕ್ರವಾರ ಸಂಜೆ ಎಲ್ಲ ಪತ್ರಿಕೆಗಳಿಗೆ ಹೇಳಿಕೆ ಬಿಡುಗಡೆ ಮಾಡಿ ಅಕಾಡೆಮಿಗೂ ಒಂದು ಪ್ರತಿ ಕಳುಹಿಸಿಕೊಟ್ಟಿದ್ದಾರೆ. ಮೊದಲು ಅಕಾಡೆಮಿಗೆ ತಿಳಿಸದೆ ಪತ್ರಿಕೆಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವುದು ಸರಿಯಾದ ಕ್ರಮವಲ್ಲ’ ಎಂದು ದೂರಿದರು.
*
ರಾಮಾಯಣ, ಮಹಾಭಾರತ ಇತ್ಯಾದಿ ಕೃತಿಗಳು ಹಿಂದೂ ಪುರಾಣ ಕಾವ್ಯಗಳಲ್ಲ. ಹಿಂದೂ ಎನ್ನುವ ಕಲ್ಪನೆಯೇ ಆಗ ಇರಲಿಲ್ಲ. ಪುರಾಣ ಕಾವ್ಯಗಳ ಹೈಜಾಕೀಕರಣ ನಡೆದಿದೆ.
- ಬರಗೂರು ರಾಮಚಂದ್ರಪ್ಪ
ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.