ADVERTISEMENT

‘ಮಧ್ಯಂತರ ಆದೇಶ ಕೋರಿ ಮನವಿ ಸಲ್ಲಿಸಿ’

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 20:14 IST
Last Updated 21 ಡಿಸೆಂಬರ್ 2013, 20:14 IST

ಹುಬ್ಬಳ್ಳಿ: ‘ಮಹಾದಾಯಿ ನದಿ ನೀರು ಬಳಕೆ ಸಂಬಂಧ ಮಧ್ಯಂತರ ಆದೇಶ ನೀಡು­ವಂತೆ ರಾಜ್ಯ ಸರ್ಕಾರ ನ್ಯಾಯಮಂಡ­ಳಿ­ಗೆ ಅರ್ಜಿ ಸಲ್ಲಿಸಬಹುದಾಗಿದೆ’ ಎಂದು ಮಹಾದಾಯಿ ನ್ಯಾಯಮಂಡಳಿ ಅಧ್ಯಕ್ಷ ಜೆ.ಎಂ. ಪಾಂಚಾಲ್‌ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ನ್ಯಾಯಮಂಡಳಿ ವತಿಯಿಂದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

‘ಮಹಾದಾಯಿ ನದಿ ತಿರುವು ಯೋಜನೆ ಅಡಿ 7.56 ಟಿಎಂಸಿ ನೀರು ಬಳಸಿಕೊಂಡು ಕುಡಿಯುವ ನೀರು ಪೂರೈಕೆ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮತಿಯನ್ನು ಮಧ್ಯಂತರ  ಆದೇಶ­ದ ಮೂಲಕ ನೀಡಬೇಕು’ ಎಂದು ಕಳಸಾ –ಬಂಡೂರಿ ನಾಲಾ, ಮಲ­ಪ್ರಭಾ ನದಿ ಜೋಡಣಾ ಹೋರಾಟ ಸಮಿತಿಯ ಸದಸ್ಯರು ಸಲ್ಲಿಸಿದ ಮನವಿಗೆ ಈ ಪ್ರತಿಕ್ರಿಯೆ ನೀಡಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಶಾಸಕ ಎನ್‌.ಎಚ್‌. ಕೋನರಡ್ಡಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಮುಖಂಡರು ನ್ಯಾಯ­ಮಂಡಳಿಗೆ ಅಹವಾಲು ಸಲ್ಲಿಸಿದರು.

ಸರ್ಕಾರದ ಚಿಂತನೆ : ‘ಮಧ್ಯಂತರ ಆದೇಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸುವ ಸಂಬಂಧ ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ’ ಎಂದು ರಾಜ್ಯದ ಪರ ವಕೀಲ ಮೋಹನ ಕಾತರಕಿ ತಿಳಿಸಿದರು.

‘ಮಧ್ಯಂತರ ಆದೇಶಕ್ಕೆ ಅರ್ಜಿ ಸಲ್ಲಿಸುವ ಕುರಿತು ಕರ್ನಾಟಕವು ನ್ಯಾಯಮಂಡಳಿಯ ಮುಂದೆ ತನ್ನ ಹಕ್ಕನ್ನು ಈಗಾಗಲೇ ಕಾಯ್ದಿರಿಸಿದೆ ಎಂದು ಅವರು  ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.