ADVERTISEMENT

‘ಶ್ರೀ ಸಾಹಿತ್ಯ ಪ್ರಶಸ್ತಿ’ಗೆ ಲಕ್ಷ್ಮೀನಾರಾಯಣ ಭಟ್ಟರ ಆಯ್ಕೆ: 23ರಂದು ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:32 IST
Last Updated 10 ಮಾರ್ಚ್ 2014, 19:32 IST

ಬೆಂಗಳೂರು: ‘ಬಿಎಂಶ್ರೀ ಸ್ಮಾರಕ ಪ್ರತಿ­ಷ್ಠಾನದ ಪ್ರಥಮ ‘ಶ್ರೀ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಕವಿ ಡಾ.ಎನ್‌.­ಎಸ್‌.­­ಲಕ್ಷ್ಮೀ­-ನಾರಾಯಣ ಭಟ್ಟ ಅವರು ಆಯ್ಕೆ­ಯಾಗಿದ್ದು, ಮಾರ್ಚ್‌ 23 ರಂದು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿ­ಕೊಳ್ಳ­ಲಾ­ಗಿದೆ’ ಎಂದು ಪ್ರತಿ­ಷ್ಠಾನದ ಅಧ್ಯಕ್ಷ ಡಾ.ಪಿ.­ವಿ.ನಾರಾಯಣ ತಿಳಿಸಿದರು.

ನಗರದ ನೃಪತುಂಗ ರಸ್ತೆ­ಯಲ್ಲಿ­ರುವ ದಿ ಮಿಥಿಕ್‌ ಸೊಸೈಟಿ ಸಭಾಂ­ಗಣ­­ದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿಮ­­ರ್ಶಕ ಡಾ.ಜಿ.­ಎಸ್‌.ಅಮೂರ ಪ್ರಶಸ್ತಿ ಪ್ರದಾನ ಮಾಡ­ಲಿದ್ದಾರೆ. ನಿಘಂಟು ತಜ್ಞ ಪ್ರೊ.ಜಿ.­ವೆಂಕಟ­ಸುಬ್ಬಯ್ಯ ಅವರು ಅಧ್ಯ­ಕ್ಷತೆ ವಹಿಸ­ಲಿ­ದ್ದಾರೆ ಎಂದು ಸೋಮ­ವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಿ.ಎಂ.ಶ್ರೀಕಂಠಯ್ಯರ ಮೊಮ್ಮ­ಗಳಾದ ಕಮಲಿನಿ ಶಾ.­ಬಾಲೂ­­ರಾವ್‌  ಪ್ರತಿ­ಷ್ಠಾನ­ದಲ್ಲಿ ₨15 ಲಕ್ಷಗಳ ದತ್ತಿ­ಸ್ಥಾಪಿಸಿ­ದ್ದಾರೆ. ಇದರಿಂದ ಪ್ರಶಸ್ತಿ­ಯನ್ನು ನೀಡ­ಲಾ­ಗುತ್ತಿದೆ. ಪ್ರಶಸ್ತಿಯು ₨1 ಲಕ್ಷ ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಜ್ಞಾನಪೀಠ, ಸರಸ್ವತಿ ಸಮ್ಮಾನ್‌, ಪಂಪ ಮತ್ತು ನೃಪತುಂಗ ಪ್ರಶಸ್ತಿ ಪುರಸ್ಕೃತರನ್ನು ಬಿಟ್ಟು ಉಳಿದವರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುವುದು. ಸಾಹಿತಿ­ಗಳಾದ ಸಿದ್ದಲಿಂಗ ಪಟ್ಟಣ­ಶೆಟ್ಟಿ, ತಾಳ್ತಜೆ ಡಾ.­ವಸಂತ­ಕುಮಾರ್‌, ಡಾ.ಎನ್.­ಎಸ್‌.­ತಾರಾ­ನಾಥ, ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮತ್ತು ಡಾ.ವಿಜಯಾ ಅವರ­ನ್ನೊಳಗೊಂಡ ಸಮಿತಿಯು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.