ಸಂಡೂರು (ಬಳ್ಳಾರಿ ಜಿಲ್ಲೆ): ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ಭಾರತೀಯ ಗಣಿ ಇಲಾಖೆಯಲ್ಲಿ (ಇಂಡಿಯನ್ ಬ್ಯುರೋ ಆಫ್ ಮೈನ್ಸ್) ಸಹಾಯಕ ನಿಯಂತ್ರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕನ್ನಡಿಗ ಇಬ್ರಾಹಿಂ ಷರೀಫ್ (36) ನವೆಂಬರ್ 25 ರಿಂದ ನಾಪತ್ತೆಯಾಗಿರುವುದರಿಂದ ಅವರ ಕುಟುಂಬ ವರ್ಗ ಆತಂಕಗೊಂಡಿದೆ.
ಷರೀಫ್ ಅವರ ಊರಾದ ಯಶವಂತನಗರ ಗ್ರಾಮದಲ್ಲಿ ಆತಂಕ, ದುಗುಡ ಎದ್ದು ಕಾಣುತ್ತಿದೆ. ‘ನಮ್ಮ ಸಹೋದರನ ಬಗ್ಗೆ ವಾರವಾದರೂ ಯಾವುದೇ ಸುಳಿವು ದೊರೆತಿಲ್ಲ. ಪೊಲೀಸರ ತನಿಖೆ ಯಾವ ದಿಕ್ಕಿನಲ್ಲಿ ಸಾಗಿದೆ ಎಂಬುದೂ ತಿಳಿಯುತ್ತಿಲ್ಲ. ಕುಟುಂಬದವರೆಲ್ಲರೂ ಈ ಕುರಿತು ತುಂಬಾ ಚಿಂತಿತರಾಗಿದ್ದೇವೆ.
ರಾಜ್ಯ ಸರ್ಕಾರವು ಒಡಿಶಾ ಸರ್ಕಾರ ಮತ್ತು ಅಲ್ಲಿನ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಸಹೋ-ದರನನ್ನು ಶೀಘ್ರವೇ ಹುಡುಕಿಸಿಕೊಡಲಿ’ ಎಂದು ಭುವನೇಶ್ವರಕ್ಕೆ ಹೋಗಿರುವ ಇಬ್ರಾಹಿಂ ಸಹೋದರ ಸುಭಾನ್ ತಮ್ಮನ್ನು ಸಂಪರ್ಕಿಸಿದ ‘ಪ್ರಜಾವಾಣಿ’ ಮೂಲಕ ಮನವಿ ಮಾಡಿದರು.
‘ಬಕ್ರೀದ್ ಹಬ್ಬಕ್ಕೆ ಇಬ್ರಾಹಿಂ ಇಲ್ಲಿಗೆ ಬಂದು ಹೋಗಿದ್ದ. ಮಗ ಬೇಗನೇ ಮನೆಗೆ ಬರುವಂತಾಗಲಿ...’ ಎಂದು ಯಶವಂತನಗರದ ಮನೆಯಲ್ಲಿದ್ದ ಅವರ ತಂದೆ ಗಿಡ್ಡುಸಾಬ್ ಕಣ್ಣೀರಿಟ್ಟರು.‘ಇಬ್ರಾಹಿಂ ಬೈಕ್ ಕಚೇರಿಯಿಂದ ಸ್ವಲ್ಪ ದೂರದಲ್ಲಿಯ ಖಾಸಗಿ ಆಸ್ಪತ್ರೆಯ ಮುಂದೆ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿ ಒಂದು ವಾರವಾದರೂ ಯಾವುದೇ ಸುಳಿವು ಸಿಕ್ಕಿಲ್ಲ’ ಎಂದು ಕುಟುಂಬದ ಸದಸ್ಯರು ಕಳವಳ ವ್ಯಕ್ತಪಡಿಸಿದರು.
‘ಗೃಹ ಸಚಿವ ಮತ್ತು ರಾಜ್ಯ ಪೊಲೀಸ್ ವರಿಷ್ಠರೊಂದಿಗೆ ಮಾತನಾಡಿದ್ದು, ಅವರೂ ಒಡಿಶಾ ಪೊಲೀಸ್ ವರಿಷ್ಠರೊಂದಿಗೆ ಮಾತುಕತೆ ನಡೆಸಿದ್ದಾರೆ. ವಿಧಾನ ಮಂಡಲದ ಅಧಿವೇಶನದಲ್ಲಿಯೂ ಈ ವಿಷಯ ಪ್ರಸ್ತಾಪಿಸುವೆ’ ಎಂದು ಶಾಸಕ ಈ.ತುಕಾರಾಂ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.