ಬೆಂಗಳೂರು: ಕೈ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್ಟಿ) ಮುಕ್ತಗೊಳಿಸುವ ಕುರಿತು ಜನಾಭಿಪ್ರಾಯ ಮೂಡಿಸುವ ಉದ್ದೇಶದಿಂದ ಗ್ರಾಮ ಸೇವಾ ಸಂಘದ ಆಶ್ರಯದಲ್ಲಿ ರಂಗಕರ್ಮಿ ಪ್ರಸನ್ನ ಅವರು ಇದೇ 14ರಿಂದ 18ರವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
‘ನಗರದ ನಿಡುಮಾಮಿಡಿ ಮಠದ ಆವರಣದಲ್ಲಿ ಅಂದು ಬೆಳಿಗ್ಗೆ 11 ಗಂಟೆಯಿಂದ ಉಪವಾಸ ಕೂರಲಿದ್ದೇನೆ. 13ರಂದು ಮೈಸೂರಿನಲ್ಲಿ ಕರ ನಿರಾಕರಣೆ ಸತ್ಯಾಗ್ರಹ ನಡೆಯಲಿದೆ. ಇದೇ ವೇಳೆ, ರಾಜ್ಯದ ಜಿಲ್ಲಾ ಕೇಂದ್ರಗಳಲ್ಲೂ ಸತ್ಯಾಗ್ರಹ ನಡೆಯಲಿದೆ’ ಎಂದು ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೈ ಉತ್ಪನ್ನಗಳನ್ನು ಕರಮುಕ್ತಗೊಳಿಸುವ ಬೇಡಿಕೆಗೆ ರಾಜ್ಯ ಸರ್ಕಾರದ ಬೆಂಬಲ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಧಾನ ಕಾರ್ಯದರ್ಶಿಗೆ ಮನವಿ ಪತ್ರ ನೀಡಿದ್ದೇವೆ. ಈ ಪತ್ರಕ್ಕೆ ಸಾಹಿತಿಗಳು, ಇತಿಹಾಸಕಾರರು, ರಂಗಕರ್ಮಿಗಳು, ಕಲಾವಿದರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಸ್ವಾಮೀಜಿಗಳು ಸಹಿ ಹಾಕಿದ್ದಾರೆ’ ಎಂದರು.
‘ಈ ಮನವಿ ಪತ್ರವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರಿಗೆ ಬುಧವಾರ ನೀಡಲಿದ್ದೇವೆ. ಪಕ್ಷಭೇದ ಮರೆತು ಎಲ್ಲರೂ ಒಟ್ಟಾಗಿ ಜಿಎಸ್ಟಿ ಕೌನ್ಸಿಲ್ ಮೇಲೆ ಒತ್ತಡ ಹೇರಬೇಕು ಎಂಬುದು ನಮ್ಮ ಉದ್ದೇಶ’ ಎಂದರು.
ಮನವಿ ಪತ್ರದಲ್ಲಿ ಏನಿದೆ?: ‘ಖಾದಿ ಬಟ್ಟೆಯಿಂದ ಹಿಡಿದು ಕೃಷಿ ಉತ್ಪನ್ನಗಳವರೆಗೆ, ಚಮ್ಮಾರನ ಚಪ್ಪಲಿಯಿಂದ ಹಿಡಿದು ಕುಂಬಾರನ ಮಡಿಕೆವರೆಗೆ ಎಲ್ಲ ರೀತಿಯ ಗ್ರಾಮೀಣ ಉತ್ಪನ್ನಗಳನ್ನೂ ಜಿಎಸ್ಟಿಯಿಂದ ಮುಕ್ತಗೊಳಿಸಬೇಕು. ಗ್ರಾಮೀಣ ತಯಾರಿಕರು ತಮ್ಮದೇ ಮಾರಾಟ ಸಹಕಾರ ಸಂಘಗಳನ್ನು ರಚಿಸಿಕೊಂಡು, ನಗರಗಳ ಚಿಲ್ಲರೆ ಮಾರಾಟ ಕ್ಷೇತ್ರವನ್ನು ಪ್ರವೇಶಿಸುವುದು ಸಾಧ್ಯವಾಗಲಿದೆ.’ ಶೂನ್ಯಕರ ಸೌಲಭ್ಯ ಒದಗಿಸುವುದರಿಂದ ಗ್ರಾಮೀಣ ತಯಾರಕರು ಸಹ ತಮ್ಮದೇ ಬ್ರ್ಯಾಂಡ್ಗಳನ್ನು ಮಾರುಕಟ್ಟೆಯಲ್ಲಿ ಸ್ಥಾಪಿಸಿಕೊಳ್ಳುವುದು ಸಾಧ್ಯವಾಗಲಿದೆ. ಬಡವರು ಸಾಲದ ಕೂಪಕ್ಕೆ ಬೀಳದೆ ಗೌರವದಿಂದ ಜೀವನ ನಡೆಸುವುದು ಸಾಧ್ಯವಾಗಲಿದೆ.’
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.