ಬೆಂಗಳೂರು: `ತಾತ್ಕಾಲಿಕ ಪಡಿತರ ಚೀಟಿ ಹೊಂದಿರುವವರಿಗೆ ಈ ತಿಂಗಳ 15ರೊಳಗೆ ಕಾಯಂ ಪಡಿತರ ಚೀಟಿ ವಿತರಿಸಲಾಗುವುದು. ನಿಗದಿತ ಅವಧಿಯಲ್ಲಿ ಪಡಿತರ ಚೀಟಿ ವಿತರಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್.ಜೀವರಾಜ್ ಬುಧವಾರ ಇಲ್ಲಿ ಎಚ್ಚರಿಕೆ ನೀಡಿದರು.
`ತಾತ್ಕಾಲಿಕ ಪಡಿತರ ಚೀಟಿ ಪಡೆದಿದ್ದ ಒಟ್ಟು 40,52,871 ಮಂದಿಯ ಬಯೋಮೆಟ್ರಿಕ್ ಗುರುತು ಸಂಗ್ರಹಿಸಲಾಗಿದೆ. ಇದರಲ್ಲಿ 18,77,910 ಮಂದಿಗೆ ಕಾಯಂ ಪಡಿತರ ಚೀಟಿ ವಿತರಿಸಲಾಗಿದೆ. ಉಳಿದ ಅರ್ಹ ಕುಟುಂಬಗಳಿಗೆ ಇದೇ 15ರ ಒಳಗೆ ಕಾಯಂ ಪಡಿತರ ಚೀಟಿ ನೀಡಲಾಗುವುದು. ಬಯೋಮೆಟ್ರಿಕ್ ಗುರುತು ಸಂಗ್ರಹಿಸಿದ ನಂತರವೂ ಕಾರ್ಡ್ಗಳನ್ನು ಮುದ್ರಿಸಿ, ಸಂಬಂಧಪಟ್ಟವರಿಗೆ ವಿತರಣೆ ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು~ ಎಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.
ಕಾರ್ಡ್ಗಳ ವಿತರಣೆಗೆ ಈಗ ವೇಗ ಸಿಕ್ಕಿದೆ. ಎಂಟು ದಿನಗಳ ಹಿಂದೆ 10 ಲಕ್ಷ ಕಾರ್ಡ್ಗಳೂ ವಿತರಣೆ ಆಗಿರಲಿಲ್ಲ. ಈಗ ಅದು 18 ಲಕ್ಷ ದಾಟಿದೆ. ಪ್ರತಿ ಜಿಲ್ಲೆಯ ಪ್ರಗತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಿ, ನಿರ್ದೇಶನ ನೀಡಲಾಗುತ್ತಿದೆ ಎಂದರು.
ವಸೂಲಿಗೆ ಅವಕಾಶ ಇಲ್ಲ: ಬಯೋಮೆಟ್ರಿಕ್ ಗುರುತು ಸಂಗ್ರಹಿಸಿ, ಭಾವಚಿತ್ರ ತೆಗೆದು, ಕಾರ್ಡ್ ನೀಡುವುದಕ್ಕೆ ಪ್ರತಿಯೊಬ್ಬರಿಂದ ಐದು ರೂಪಾಯಿ ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಕೆಲವು ಕಡೆ ನಿಗದಿಗಿಂತ ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ಸಂಸ್ಥೆಗಳ ಗುತ್ತಿಗೆಯನ್ನು ರದ್ದುಪಡಿಸಲಾಗುವುದು ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.