ADVERTISEMENT

15 ಮತ್ತು 16ರಂದು ರಾಜ್ಯದಲ್ಲಿ ಅರವಿಂದ ಕೇಜ್ರಿವಾಲ್‌ ಪ್ರಚಾರ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ಬೆಂಗಳೂರು: ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಹಾಗೂ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ಇದೇ 15 ಮತ್ತು 16ರಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಪೂರಕವಾಗಿ ರ್‍್ಯಾಲಿಗಳನ್ನು ನಡೆಸಲಿದ್ದಾರೆ.

ಕೇಜ್ರಿವಾಲ್‌ ಅವರು ಮಾರ್ಚ್‌ 15ರ ಬೆಳಿಗ್ಗೆ ಬೆಂಗಳೂರಿಗೆ ಬರುವರು. ಅದೇ ದಿನ ರಾಜಧಾನಿಯ ಆಯ್ದ ಪ್ರದೇಶ­ಗಳಲ್ಲಿ ಪಕ್ಷದ ಅಭ್ಯರ್ಥಿಗಳ ಜೊತೆ ‘ರೋಡ್‌ ಷೋ’ ನಡೆಸುವರು. ಮಾ.16ರಂದು ಜನಸಭಾ ಸಮಾವೇಶ ನಡೆಸುವರು. ಸಮಾವೇಶದ ಸ್ಥಳ ಇನ್ನೂ ನಿಗದಿಯಾಗಿಲ್ಲ. ಜೊತೆಯಲ್ಲೇ ಚಿಕ್ಕ­ಬಳ್ಳಾಪುರ ಅಥವಾ ದೊಡ್ಡಬಳ್ಳಾ­ಪುರ­­ದಲ್ಲೂ ರ್‍್ಯಾಲಿ ನಡೆಸಲು ಯೋಚಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಎಎಪಿ ವಕ್ತಾರ ಮಹಂತೇಶ್ ಅರಳಿ, ‘ಲೋಕ­ಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿ­ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಗತಿ­ಯ­ಲ್ಲಿದೆ. ಕೇಜ್ರಿವಾಲ್‌ ಅವರು ರಾಜ್ಯಕ್ಕೆ ಬರುವ ಮುನ್ನವೇ ಅಭ್ಯರ್ಥಿ­ಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಎರಡನೇ ಪಟ್ಟಿ­ಯನ್ನು ಕೇಜ್ರಿವಾಲ್‌ ಅವರೇ ಬಿಡುಗಡೆ ಮಾಡಲಿದ್ದಾರೆ’ ಎಂದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗ­ಳಲ್ಲೂ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿ­ಳಿಸ­ಲಿದೆ. ಮತದಾರರಲ್ಲಿ ಜಾಗೃತಿ ಮೂಡಿ­ಸಲು ಈಗಾಗಲೇ ಮನೆ, ಮನೆ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಲಾ­ಗಿದೆ ಎಂದು ತಿಳಿಸಿದರು.

ಸಮಾಜ ಪರಿವರ್ತನಾ ಸಮುದಾ­ಯದ ಎಸ್‌.ಆರ್‌.­ಹಿರೇಮಠ, ಸ್ವಾತಂತ್ರ್ಯ ಹೋರಾಟಗಾರ ಎಚ್‌.­ಎಸ್‌.­­ದೊರೆ­ಸ್ವಾಮಿ ಅಥವಾ ವಿವೇಕಾ­ನಂದ ಯೂತ್‌ ಮೂವ್‌­ಮೆಂಟ್‌ನ ಡಾ.ಆರ್‌.­­ಬಾಲಸುಬ್ರಹ್ಮಣ್ಯಂ ಅವರ ಸ್ಪರ್ಧೆ ಸಾಧ್ಯತೆ ಕುರಿತು ಪ್ರಶ್ನಿಸಿದಾಗ, ‘ಅಂತಹ ಸಾಧ್ಯತೆಗಳು ಇಲ್ಲ. ವಯಸ್ಸಿನ ಕಾರಣದಿಂದಾಗಿ ಚುನಾವಣೆಗೆ ಸ್ಪರ್ಧಿ­ಸು­ವುದಿಲ್ಲ ಎಂದು ಹಿರೇಮಠ ಮತ್ತು ದೊರೆಸ್ವಾಮಿ ಈಗಾಗಲೇ ತಿಳಿಸಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.