
ಬೆಂಗಳೂರು: ಇಬ್ಬರು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮನೆಗಳಲ್ಲಿ ತಪಾಸಣೆ ಮುಂದುವರಿಸಿರುವ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು ₹ 152 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್. ಚಿಕ್ಕರಾಯಪ್ಪ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಯೋಜನಾಧಿಕಾರಿ ಎಸ್.ಸಿ. ಜಯಚಂದ್ರ ಹಾಗೂ ಇಬ್ಬರು ಗುತ್ತಿಗೆದಾರರು ಮತ್ತವರ ಸಂಬಂಧಿಕರ ಮನೆಗಳಲ್ಲೂ ತಪಾಸಣೆ ನಡೆಸಲಾಗುತ್ತಿದೆ ಎನ್ನಲಾಗಿದೆ. ಈವರೆಗೆ ಒಟ್ಟಾರೆ ₹ 152 ಕೋಟಿ ಮೌಲ್ಯದ ಅಕ್ರಮ ಆಸ್ತಿ ಸಂಪಾದನೆಯ ದಾಖಲೆ ಪತ್ರಗಳು ಸಿಕ್ಕಿವೆ. ಅಲ್ಲದೆ ಇದುವರೆಗೆ ಒಟ್ಟು ₹5.7 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.
ಗುರುವಾರದ ತನಕ ₹ 2 ಸಾವಿರ ಮುಖ ಬೆಲೆಯ ₹ 4.7 ಕೋಟಿ ದೊರೆತಿದ್ದು, ಶುಕ್ರವಾರ ಇದರ ಮೊತ್ತ ₹ 5.7 ಕೋಟಿಗೆ ಏರಿಕೆಯಾಗಿದೆ. ಅಲ್ಲದೆ ₹ 90 ಲಕ್ಷ ನಗದು ಹಳೆಯ ನೋಟುಗಳಲ್ಲಿ ದೊರೆತಿದೆ. ಜೊತೆಗೆ, ₹ 5 ಕೋಟಿ ಮೌಲ್ಯದ 7 ಕೆಜಿ ಚಿನ್ನದ ಗಟ್ಟಿ ಮತ್ತು 9 ಕೆಜಿ ಆಭರಣಗಳು ಪತ್ತೆಯಾಗಿರುವುದನ್ನು ಐಟಿ ಅಧಿಕಾರಿಗಳು ಖಚಿತಪಡಿಸಿದ್ದಾರೆ. ನೋಟು ಎಣಿಸುವ ಯಂತ್ರದೊಂದಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಐಟಿ ಅಧಿಕಾರಿಗಳು ತಪಾಸಣೆ ಮುಂದುವರಿಸಿದ್ದಾರೆ.
ಅಕ್ರಮ ಆಸ್ತಿ ಮತ್ತು ಹಣ ಸಂಪಾದನೆ ಮಾಡಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಮೊಕದ್ದಮೆ ದಾಖಲಿಸಲು ಆದಾಯ ತೆರಿಗೆ ಕಾಯ್ದೆಯಲ್ಲಿ ಅವಕಾಶ ಇಲ್ಲ. ನಿಯಮದ ಪ್ರಕಾರ, ದಂಡ ಪಡೆದು ಪ್ರಕರಣವನ್ನು ನ್ಯಾಯಾಲಯಕ್ಕೆ ಅದು ಒಪ್ಪಿಸಲಿದೆ.
ಇದೇ ಮೊದಲು: ₹ 2 ಸಾವಿರ ಮುಖ ಬೆಲೆಯ ಹೊಸ ನೋಟುಗಳು ಇಷ್ಟು ಪ್ರಮಾಣದಲ್ಲಿ ದೊರೆತಿರುವುದು ದೇಶದಲ್ಲೇ ಇದೇ ಮೊದಲು.
₹ 5.7 ಕೋಟಿ ಮೊತ್ತವನ್ನು ಹೊಸ ನೋಟಿಗೆ ಬದಲಾವಣೆ ಮಾಡಿಕೊಡುವಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರ ಇದ್ದರೆ ಅವರ ವಿರುದ್ಧ ರಿಸರ್ವ್ ಬ್ಯಾಂಕ್ (ಆರ್ಬಿಐ) ಕ್ರಮ ಕೈಗೊಳ್ಳಲಿದೆ. ಈ ಸಂಬಂಧ ಯಾರ ವಿರುದ್ಧವೂ ಮೊಕದ್ದಮೆ ದಾಖಲಿಸುವುದಿಲ್ಲ ಎಂದು ಐಟಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಮಾಹಿತಿ ಕೇಳಿದ ಎಸಿಬಿ: ರಾಜ್ಯ ಸರ್ಕಾರದ ಇಬ್ಬರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಯಿಂದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮಾಹಿತಿ ಕೇಳಿದೆ.
ಅಕ್ರಮ ಹಣ ಮತ್ತು ಆಸ್ತಿ ಸಂಪಾದಿಸಿರುವ ದಾಖಲೆಗಳು ದೊರೆತಿರುವ ಕಾರಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಳ್ಳಲು ಮಾಹಿತಿ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕರಾಯಪ್ಪ, ಜಯಚಂದ್ರ ಅಮಾನತು
ಬೆಳಗಾವಿ: ಆದಾಯ ತೆರಿಗೆ (ಐಟಿ) ದಾಳಿಗೆ ಒಳಗಾಗಿರುವ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್. ಚಿಕ್ಕರಾಯಪ್ಪ ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಮುಖ್ಯ ಯೋಜನಾಧಿಕಾರಿ ಎಸ್.ಸಿ. ಜಯಚಂದ್ರ ಅವರನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಪ್ರಕಟಿಸಿದರು.
ಅಧಿಕಾರಿಗಳು ಯಾರಿಗೂ ಆಪ್ತರಲ್ಲ: ಮುಖ್ಯಮಂತ್ರಿ
ಬೆಳಗಾವಿ/ಕೊಪ್ಪಳ ವರದಿ: ‘ಅಧಿಕಾರಿಗಳು ಅಧಿಕಾರಿಗಳೇ ಹೊರತು, ಯಾರಿಗೂ ಆಪ್ತರಲ್ಲ. ಮುಖ್ಯಮಂತ್ರಿ ಆಪ್ತ, ಸಚಿವರ ಆಪ್ತ ಎನ್ನುವುದೆಲ್ಲ ಮಾಧ್ಯಮದವರ ಸೃಷ್ಟಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಬ್ಬರು ಎಂಜಿನಿಯರುಗಳ ಮನೆಗಳ ಮೇಲೆ ನಡೆಸಿದ ದಾಳಿ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಅವರು ಈ ಉತ್ತರ ನೀಡಿದರು.
‘ಅಧಿಕಾರಿಗಳು ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದರೆ, ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ. ಭ್ರಷ್ಟ ಅಧಿಕಾರಿಗಳು ಯಾರೇ ಆಗಿದ್ದರೂ ಅವರನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
‘ಐಟಿ ಅಧಿಕಾರಿಗಳ ದಾಳಿ ಬಗ್ಗೆ ನಾನು ಪತ್ರಿಕೆಯಲ್ಲಿ ಓದಿದ್ದೇನೆ. ಅವರು ನನ್ನ ಆಪ್ತರೆಂದು ನಿಮಗೆ (ಪತ್ರಕರ್ತರಿಗೆ) ಹೇಳಿದ್ದು ಯಾರು?, ಸುಮ್ಮನೆ ಗಾಳಿ ಸುದ್ದಿಗಳನ್ನು ಹರಡಬಾರದು. ದಾಳಿ ನಡೆಸಿದ್ದು ಕೇಂದ್ರದ ಐ.ಟಿ ಅಧಿಕಾರಿಗಳು. ಅವರು ನಮಗೆ ವರದಿ ಅಥವಾ ಮಾಹಿತಿ ಕೊಡುವುದಿಲ್ಲ. ಅವರೇನು ಕಾನೂನು ಕ್ರಮ ಕೈಗೊಳ್ಳುತ್ತಾರೋ ಕೈಗೊಳ್ಳಲಿ. ಉಪ್ಪು ತಿಂದವರು ನೀರು ಕುಡಿಯುತ್ತಾರೆ’ ಎಂದರು.
‘ನಿರ್ದಿಷ್ಟ ಜಾತಿಯ ಅಧಿಕಾರಿ ಸಿಕ್ಕಿ ಬಿದ್ದರೆ ಅವನನ್ನು ನನ್ನ ಆಪ್ತ ಎಂದೆಲ್ಲಾ ತಳುಕು ಹಾಕುವುದು ಸರಿಯಲ್ಲ’ ಎಂದು ಗರಂ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.