ಬೆಂಗಳೂರು: ‘ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ರೂಪಿಸಿರುವ ‘ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿದ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ ಕಾಯ್ದೆ–2017’ ಅನ್ನು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಂತೆ ಯಥಾವತ್ ಜಾರಿಗೊಳಿಸಬೇಕು’ ಎಂದು ರಾಜ್ಯ ಸರ್ಕಾರಿ ಎಸ್.ಸಿ, ಎಸ್.ಟಿ ನೌಕರರ ಸಮನ್ವಯ ಸಮಿತಿ ಒತ್ತಾಯಿಸಿದೆ.
ರಾಜ್ಯ ಮುಖ್ಯ ಕಾರ್ಯದರ್ಶಿಗೆ (ಸಿ.ಎಸ್) ಟಿ.ಎಂ. ವಿಜಯಭಾಸ್ಕರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿರುವ ಸಮಿತಿಯ ಪದಾಧಿಕಾರಿಗಳು, ‘ಬಿ.ಕೆ. ಪವಿತ್ರ ಪ್ರಕರಣದಲ್ಲಿ ಈ ಹಿಂದೆ ನೀಡಿದ್ದ ತೀರ್ಪು ಅನ್ವಯ ಎಸ್.ಟಿ, ಎಸ್.ಟಿ ನೌಕರರನ್ನು ಹಿಂಬಡ್ತಿಗೊಳಿಸಿ ನೀಡಿದ್ದ ಆದೇಶವನ್ನು ಎರಡು ದಿನಗಳ ಒಳಗೆ ವಾಪಸ್ ಪಡೆಯಬೇಕು. 15 ದಿನಗಳ ಒಳಗೆ ಎಲ್ಲ ಇಲಾಖೆಗಳ ಜ್ಯೇಷ್ಠತಾ ಪಟ್ಟಿಯನ್ನು ಪುನರ್ಅವಲೋಕಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಹಿಂಬಡ್ತಿ ಗೊಂಡವರುಹಿಂಬಡ್ತಿ ಪೂರ್ವದಲ್ಲಿ ನಿರ್ವಹಿಸುತ್ತಿದ್ದ ಹುದ್ದೆ ಮತ್ತು ಅದೇ ಸ್ಥಳದಲ್ಲಿ ನಿಯೋಜಿಸಿ ಆದೇಶ ಹೊರಡಿಸಬೇಕು. ಬಡ್ತಿಮೀಸಲು ಕಾಯ್ದೆಯನ್ನು ತಿರುಚಿ ಆದೇಶ ಹೊರಡಿಸುವ ಅಧಿಕಾರಿಗಳ ವಿರುದ್ಧ ಎಸ್.ಸಿ, ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಕರ್ತವ್ಯ ಲೋಪದಡಿ ಕ್ರಮ
ತೆಗೆದುಕೊಳ್ಳಬೇಕು’ ಎಂದರು.
‘ಪವಿತ್ರ ಪ್ರಕರಣದಲ್ಲಿ ಈ ಹಿಂದೆ ನೀಡಿದ್ದ ತೀರ್ಪು ಅನ್ವಯ ಜ್ಯೇಷ್ಠತೆ ಪರಿಷ್ಕರಿಸುವ ವೇಳೆ ಆದೇಶವನ್ನು ತಿರುಚಿದ್ದರಿಂದ ಹಿಂಬಡ್ತಿ ಮತ್ತು 13 ಜನ ನೌಕರರ ಸಾವಿಗೆ ಪರೋಕ್ಷವಾಗಿ ಕಾರಣರಾದ ಅಧಿಕಾರಿಗಳನ್ನು ಪತ್ತೆ ಹಚ್ಚಿ ಕೊಲೆ ಮೊಕದ್ದಮೆ ದಾಖಲಿಸಬೇಕು’ ಎಂದೂ ಸಮಿತಿ ಕೋರಿದೆ.
ಸಮಿತಿಯ ಅಧ್ಯಕ್ಷ ಡಿ. ಶಿವಶಂಕರ್, ಪ್ರಧಾನ ಕಾರ್ಯದರ್ಶಿ ಎಸ್. ವಿಜಯಕುಮಾರ್, ಕಾನೂನು ಸಲಹೆಗಾರ ಡಿ. ಚಂದ್ರಶೇಖರಯ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.