ADVERTISEMENT

24ರಿಂದ ಬಿಜೆಪಿ ಚಿಂತನಾ ಶಿಬಿರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

ಶಿವಮೊಗ್ಗ: ಬಿಜೆಪಿ ಶಾಸಕರು, ಸಂಸತ್ ಸದಸ್ಯರ ಚಿಂತನಾ ಶಿಬಿರ ಬೆಂಗಳೂರಿನಲ್ಲಿ  ಇದೇ 24 ಮತ್ತು 25ರಂದು  ನಡೆಯಲಿದೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಪ್ರಕಟಿಸಿದರು.

ಪಕ್ಷದ ಸಂಘಟನೆ, ಶಾಸಕರು, ಸಂಸದರ ಕ್ಷೇತ್ರಗಳ ಅಭಿವೃದ್ಧಿ ಹಾಗೂ ಮುಂದಿನ ಚುನಾವಣೆ ತಯಾರಿ ಕುರಿತು ಶಿಬಿರದಲ್ಲಿ ಚರ್ಚಿಸಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿಂತನಾ ಶಿಬಿರಕ್ಕೆ ರಾಷ್ಟ್ರೀಯ ನಾಯಕರೊಬ್ಬರು ಆಗಮಿಸುವರು. ಅವರ ಹೆಸರು ಶುಕ್ರವಾರ ಅಂತಿಮವಾಗಲಿದೆ ಎಂದರು.

ಹಾಗೆಯೇ ಮಾರ್ಚ್ 2ರಂದು ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಮಾರ್ಚ್ 1ರಂದು ಎಲ್ಲ ಮೋರ್ಚಾಗಳ ಸಭೆ ಆಯೋಜಿಸಲಾಗಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಹಾಲಿ ಸ್ಥಿತಿ ಹಾಗೂ ಮುಂದಿನ ವಿಧಾನಸಭಾ ಚುನಾವಣಾ ತಯಾರಿ ಕುರಿತಂತೆ ಈ ಸಭೆಗಳಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.

ಈ ನಡುವೆಯೇ ಸಚಿವ ಸಂಪುಟ ವಿಸ್ತರಿಸಲು ತೀರ್ಮಾನಿಸಲಾಗಿದೆ. ಸಚಿವರ ಖಾತೆಗಳ ಮರು ಹಂಚಿಕೆ, ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಸೇರಿದಂತೆ ಸಾಕಷ್ಟು ಬದಲಾವಣೆಗಳಾಗಲಿವೆ. ನಿಗಮ-ಮಂಡಳಿಗಳಿಗೆ ಸಹ ನೇಮಕಾತಿ ನಡೆಯಲಿದೆ ಎಂದು ಈಶ್ವರಪ್ಪ ಅವರು ಸುಳಿವು ನೀಡಿದರು.

ಎರಡು ನಿಮಿಷ ನಡೆದ ಘಟನೆಯನ್ನು ಟಿಆರ್‌ಪಿಗಾಗಿ ವಾರಗಟ್ಟಲೆ ತೋರಿಸಿದ ಮಾಧ್ಯಮಗಳು, ಸಮಾಜದ ಸ್ವಾಸ್ಥ್ಯದ ಹಿನ್ನೆಲೆಯಲ್ಲಿ ಸ್ವಲ್ಪ ಇತಿಮಿತಿಯನ್ನು ಇಟ್ಟುಕೊಳ್ಳುವುದು ಒಳಿತು. ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜಕ್ಕೆ ಅಶ್ಲೀಲ ದೃಶ್ಯಗಳನ್ನು ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ಪತ್ರಕರ್ತರ ಸಂಘಟನೆಗಳು ಚರ್ಚೆ ನಡೆಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.