ADVERTISEMENT

26ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 19:30 IST
Last Updated 22 ಜನವರಿ 2011, 19:30 IST

ಬೆಂಗಳೂರು: ಆರ್ಯುಧಾಮ ಆಸ್ಪತ್ರೆಯು ಗಣರಾಜ್ಯೋತ್ಸದ ಅಂಗವಾಗಿ ಇದೇ 26ರಂದು ಉಚಿತ ಆರ್ಯುವೇದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ.‘ಆರೋಗ್ಯ ಭಾರತಿ ಮತ್ತು ಯಲಚೇನಹಳ್ಳಿಯ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ತಜ್ಞ ಆರ್ಯುವೇದ ವೈದ್ಯರಿಂದ ಉಚಿತ ಪರೀಕ್ಷೆ, ಸೂಕ್ತ ಸಲಹೆ, ಚಿಕಿತ್ಸಾ ಮಾರ್ಗದರ್ಶನ ಹಾಗೂ ಲಭ್ಯವಿರುವ ಔಷಧಿಗಳನ್ನು ಉಚಿತವಾಗಿ ನೀಡಲಾಗುವುದು’ ಎಂದು ಆರ್ಯುಧಾಮ ಆಸ್ಪತ್ರೆಯ ಡಾ. ಸಿ.ಎ.ಕಿಶೋರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶಿಬಿರವು ಬೆಳಿಗ್ಗೆ 9 ರಿಂದ 2 ಗಂಟೆಯವರೆಗೆ ಕನಕಪುರ ಮುಖ್ಯರಸ್ತೆಯ ಯಲಚೇನಹಳ್ಳಿಯ ಕನಕನಗರದಲ್ಲಿರುವ ಆರ್ಯುಧಾಮ ಆಸ್ಪತ್ರೆಯಲ್ಲಿ ನಡೆಯಲಿದೆ.  ಅಲ್ಲದೇ ಬೆಳಿಗ್ಗೆ 8.15ಕ್ಕೆ ಸಾರಕ್ಕಿ ಸಿಗ್ನಲ್‌ನಿಂದ ಆಸ್ಪತ್ರೆಯವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ನಟ ದೊಡ್ಡಣ್ಣ, ನಟಿಯರಾದ ತಾರಾ, ಪ್ರಿಯಾಂಕ ಉಪೇಂದ್ರ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

‘ಆರೋಗ್ಯ ತಪಾಸಣೆ ಮತ್ತು ಮಾರ್ಗದರ್ಶನ ಶಿಬಿರಕ್ಕೆ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಚಾಲನೆ ನೀಡಲಿದ್ದಾರೆ. ನಟರಾದ ಯೋಗೇಶ್, ಯಶ್, ಆರ್‌ಎಸ್‌ಎಸ್‌ನ ಪ್ರಚಾರಕ ಚಂದ್ರಶೇಖರ್ ಭಂಡಾರಿ, ಪಾಲಿಕೆ ಸದಸ್ಯ ಓ.ಮಂಜುನಾಥ್ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು. ‘ಕಾಲ್ನಡಿಗೆ ಜಾಥಾದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ತುಳಸಿ ಸಸಿ ಮತ್ತು ಅಮೃತ ಬಳ್ಳಿಯನ್ನು ಉಚಿತವಾಗಿ ಶಾಸಕ ಎಂ.ಕೃಷ್ಣಪ್ಪ ನೀಡುವರು.
 
ಶಿಬಿರದಲ್ಲಿ ಚರ್ಮ ರೋಗ, ಅಸ್ತಮಾ, ಸ್ನಾಯು ನೋವು, ಬೆನ್ನು ನೋವು, ರಕ್ತದೊತ್ತಡ, ಅಲರ್ಜಿ, ಅಜೀರ್ಣ ಮುಂತಾದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದು’ ಎಂದು ವಿವರಿಸಿದರು. ಆರೋಗ್ಯ ಭಾರತಿಯ ಸಂಯೋಜಕ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ‘ಆರೋಗ್ಯ ಭಾರತಿಯು ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕೊಳೆಗೇರಿ ನಿವಾಸಿಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ 200 ಕೊಳೆಗೇರಿ ಪ್ರದೇಶಗಳಲ್ಲಿ ಸಂಸ್ಥೆಯ ಸದಸ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.