ಬೆಂಗಳೂರು: ನ್ಯಾಯಾಧೀಕರಣದ ತೀರ್ಪಿನ ಪ್ರಕಾರ ರಾಜ್ಯದಿಂದ ತಮಿಳುನಾಡಿಗೆ ಹರಿಸಬೇಕಾದ ನೀರಿಗಿಂತ 273 ಟಿಎಂಸಿ ಅಡಿ ಅಧಿಕ ನೀರು ಪ್ರಸಕ್ತ ವರ್ಷದಲ್ಲಿ ಹರಿದಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಜೂನ್ನಿಂದ ಸೆಪ್ಟೆಂಬರ್ 28ರವರೆಗೆ ನಾಲ್ಕು ತಿಂಗಳಲ್ಲಿ 450.53 ಟಿಎಂಸಿ ಅಡಿ ನೀರು ಕಾವೇರಿ ನದಿಪಾತ್ರದಿಂದ ತಮಿಳುನಾಡಿಗೆ ಹರಿದುಹೋಗಿದೆ. ಆದೇಶದ ಪ್ರಕಾರ 177 ಟಿಎಂಸಿ ಅಡಿ ನೀರು ಹರಿಸಬೇಕಿತ್ತು. ಮೂರು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದ್ದು, ತಮಿಳುನಾಡಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಹೋಗಿದೆ. ಹೆಚ್ಚುವರಿ ನೀರು ಬಳಸಿಕೊಳ್ಳಲು ಉಭಯ ರಾಜ್ಯಗಳಿಗೆ ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದೇವೆ’
ಎಂದರು.
ಟ್ಯಾಂಕರ್ ಮೂಲಕ ನೀರು ಪೂರೈಕೆ ಸ್ಥಗಿತ: ಉತ್ತಮ ಮಳೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಂದ ರಾಜ್ಯದ ಅಂತರ್ಜಲ ಮಟ್ಟದಲ್ಲಿ ಶೇ 50ರಷ್ಟು ಹೆಚ್ಚಳವಾಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುವ ಕಾರ್ಯ ಸ್ಥಗಿತವಾಗಿದೆ. ಶುದ್ಧ ಕುಡಿಯುವ ನೀರು ದೊರೆಯುತ್ತಿದ್ದು, ಕರ್ನಾಟಕ ಪ್ಲೊರೈಡ್ ನೀರಿನಿಂದ ಮುಕ್ತವಾಗಿದೆ ಎಂದು ವಿವರ
ಹಂಚಿಕೊಂಡರು.
1,298 ಕೆರೆಗಳು ಭರ್ತಿ:ಏತ ನೀರಾವರಿ ಮೂಲಕ ಈಗಾಗಲೇ 1,298 ಕೆರೆಗಳನ್ನು ಭರ್ತಿ ಮಾಡಲಾಗಿದೆ. 3,204 ಕೆರೆಗಳನ್ನು ಭರ್ತಿ ಮಾಡುವ ಕಾಮಗಾರಿಗಳು ನಡೆಯುತ್ತಿವೆ. ₹ 11 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ ಎಂದರು.
ಜಲ ಸಂಪನ್ಮೂಲ ಇಲಾಖೆಯಿಂದ ಇನ್ನೂ 12 ಲಕ್ಷ ಹೆಕ್ಟೇರ್ ಜಮೀನಿಗೆ ನೀರು ಒದಗಿಸುವ ಗುರಿ ಹೊಂದಲಾಗಿದೆ. ಕೃಷ್ಣಾ ಕೊಳ್ಳದ ಯೋಜನೆಯಿಂದ 130 ಟಿಎಂಸಿ ಅಡಿ ನೀರು ದೊರೆಯಲಿದೆ. ಇದರಿಂದ 5.91 ಲಕ್ಷ ಹೆಕ್ಟೇರ್ ಜಮೀನಿಗೆ ನೀರು ಹರಿಸಬಹುದು. ಭೂಸ್ವಾಧೀನಕ್ಕೆ ₹ 60 ಸಾವಿರ ಕೋಟಿಯ ಅಗತ್ಯವಿದೆ. ಸರ್ಕಾರ ಈಗಾಗಲೆ ₹ 10 ಸಾವಿರ ಕೋಟಿ ನೀಡಿದೆ ಎಂದು
ವಿರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.