ADVERTISEMENT

3ನೇ ಅಖಿಲ ಭಾರತ ಚೆಸ್ ಟೂರ್ನಿ: ಐಎಂ ಆಟಗಾರರ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 19:30 IST
Last Updated 2 ಅಕ್ಟೋಬರ್ 2012, 19:30 IST

ಮಂಗಳೂರು: ನಿರೀಕ್ಷೆಯಂತೆ ಎಲ್ಲ ಆರು ಮಂದಿ ಇಂಟರ್‌ನ್ಯಾಷನಲ್ ಮಾಸ್ಟರ್ ಆಟಗಾರರು ಸೇರಿದಂತೆ ಹೆಚ್ಚಿನ ರೇಟೆಡ್ ಆಟಗಾರರು 3ನೇ ಯುಕೆಸಿಎ ಕಪ್ ಅಖಿಲ ಭಾರತ ಫಿಡೆ ರೇಟೆಡ್ ಚೆಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಮಂಗಳವಾರ ಮೊದಲ ಸುತ್ತಿನ ಪಂದ್ಯ ಗೆಲ್ಲುವ ಮೊದಲು ಪರದಾಡಿದವರೆಂದರೆ ಆರನೇ ಶ್ರೇಯಾಂಕದ ಅನುಭವಿ ಐಎಂ ದಿನೇಶ್ ಕುಮಾರ್ ಶರ್ಮ ಮಾತ್ರ.

ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಆಶ್ರಯದಲ್ಲಿ ಕೊಡಿಯಾಲ್‌ಬೈಲ್‌ನ ಸುಬ್ರಹ್ಮಣ್ಯ ಸಭಾದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಎಲ್‌ಐಸಿಯ ಶರ್ಮ, ಕರ್ನಾಟಕದ ರಾಮ್ ವಿಶ್ವನಾಥನ್ ವಿರುದ್ಧ ಗೆಲುವಿಗೆ 66 ನಡೆಗಳನ್ನು ಆಡಬೇಕಾಯಿತು.

ಅಗ್ರ ಶ್ರೇಯಾಂಕದ ಐಎಂ ಪಿ.ಶ್ಯಾಮ್ ನಿಖಿಲ್, ತಮಿಳುನಾಡಿನವರೇ ಆದ ತರುಣ್ ವಿ.ಕಾಂತ್ ವಿರುದ್ಧ ಕೇವಲ 31 ನಡೆಗಳಲ್ಲಿ ಜಯಗಳಿಸಿದರೆ, ಮೈಸೂರು ಮೂಲದ ಐಎಂ ಎಂ.ಎಸ್.ತೇಜಕುಮಾರ್ (ನೈರುತ್ಯ ರೈಲ್ವೆ) ಇನ್ನೂ ಬೇಗ, 27 ನಡೆಗಳಲ್ಲಿ ಸ್ಥಳೀಯ ಆಟಗಾರ ಯುಲಾಲಿಯಾ ಎ.ಜೆ.ಪೆರೀರಾ ವಿರುದ್ಧ ಗೆಲುವು ಪೂರೈಸಿದರು.
ಐಎಂ ರತ್ನಾಕರನ್ ಕೆ. (ದಕ್ಷಿಣ ರೈಲ್ವೆ), ಕೇರಳದವರೇ ಆದ ಮುಹಮದ್ ರೇಝಾ ವಿರುದ್ಧ ಸುಲಭವಾಗಿ ಗೆದ್ದರು. ತಮಿಳುನಾಡಿನ ನಿತಿನ್ ಎಸ್. ಮತ್ತು ನೈರುತ್ಯ ರೈಲ್ವೆಯ ಹಿಮಾಂಶು ಶರ್ಮ ಕೂಡ ಗೆಲುವಿಗೆ ಪ್ರಯಾಸಪಡಲಿಲ್ಲ.

ಕರ್ನಾಟಕದ ಪಿ.ಗೋಪಾಲಕೃಷ್ಣ, ಎ.ಆಗಸ್ಟಿನ್, ಸಂತೋಷಕಷ್ಯಪ್ ಕೂಡ ಗೆಲುವಿನೊಡನೆ ಟೂರ್ನಿಯನ್ನು ಆರಂಭಿಸಿದರು. ದೇಶದ 11 ರಾಜ್ಯಗಳ 150 ಆಟಗಾರರು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಇವರಲ್ಲಿ  110 ಮಂದಿ  ರೇಟಿಂಗ್ ಪಡೆದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.