ಬೆಂಗಳೂರು: ‘1993ರಲ್ಲಿ ದ.ಕ.ಜಿಲ್ಲೆ ಕೋಮು ದಳ್ಳುರಿಗೆ ಸಿಲುಕಿತ್ತು. ಸೌದಿ ಅರೇಬಿಯಾಕ್ಕೂ ಇದರ ಬಿಸಿ ತಾಗಿತ್ತು. ಕೆಲ ಮುಸ್ಲಿಮರು ಆ ಸಮಯದಲ್ಲಿ ಸೌದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರಿನ ಪ್ರಭಾಕರ್ ಮೇಲೆ ದಾಳಿಗೆ ಮುಂದಾದರು. ಆಗ ಪ್ರಭಾಕರ್ಗೆ ರಕ್ಷಣೆ ನೀಡಿ "ಪ್ರಭಾಕರ್ ನಮ್ಮವನು. ಅವನ ಮೈ ಮುಟ್ಟಿದರೆ ಜಾಗ್ರತೆ..." ಎಂದು ಹೇಳಿ ರಕ್ಷಿಸಿದವರು ಮತ್ಯಾರೂ ಅಲ್ಲ. ಕೊಟ್ಟಾರ ಚೌಕಿಯಲ್ಲಿ ಧರ್ಮಾಂಧರ ಮಚ್ಚಿನೇಟಿಗೆ ಸಿಲುಕಿ ಇಂದು ಆಸ್ಪತ್ರೆಯಲ್ಲಿ ನಿಧನರಾದ ಇದೇ ಬಶೀರ್.’
ಕೊಟ್ಟಾರ ಚೌಕಿ ಬಳಿಯ ಫಾಸ್ಟ್ಫುಡ್ ಮಳಿಗೆ ಬಾಗಿಲು ಮುಚ್ಚಿ ಮನೆಗೆ ಮರಳುವ ತವಕದಲ್ಲಿದ್ದಾಗ ಮತೀಯ ಗೂಂಡಾಗಳ ದಾಳಿಗೆ ಜರ್ಝರಿತವಾಗಿ ನಗರದ ಎ.ಜೆ.ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ ಆಕಾಶಭವನ ನಿವಾಸಿ ಅಹಮ್ಮದ್ ಬಶೀರ್ ಚಿರಶಾಂತಿಯಲ್ಲಿದ್ದಾರೆ. ಅವರ ವ್ಯಕ್ತಿತ್ವದ ಕುರಿತು ಫೇಸ್ಬುಕ್ಗಳಲ್ಲಿ ಪುಟಗಳಲ್ಲಿ ಹಲವು ಪೋಸ್ಟ್ಗಳು ಪ್ರಕಟಗೊಳ್ಳುತ್ತಿವೆ.
ಮಂಗಳೂರಿನ ರಶೀದ್ ವಿಟ್ಲ ಅವರು ತಮ್ಮ ಫೇಸ್ಬುಕ್ನಲ್ಲಿ ಬಶೀರ್ ಕುರಿತಾದ ನೆನಪು ಪ್ರಕಟಿಸಿಕೊಂಡಿದ್ದಾರೆ. ಬಶೀರ್ ಹಾಗೂ ಅವರ ಸ್ನೇಹಿತ ಪ್ರಭಾಕರ್ ಸೌದಿಯಲ್ಲಿ ಕಳೆದ ದಿನಗಳನ್ನು ಪ್ರಸ್ತಾಪಿಸಿದ್ದಾರೆ.
‘ಮಂಗಳೂರಿನ ಆಕಾಶಭವನದ ಜನರಿಗೆ ಬಶೀರ್ ಎಂದರೆ ತುಂಬಾ ಪ್ರೀತಿ. ಬಶೀರ್ ತನ್ನೂರಿನ ಪರೋಪಕಾರಿ. ಹಿಂದೂ, ಮುಸ್ಲಿಮ್ ಎನ್ನದೆ ಎಲ್ಲರೊಂದಿಗೆ ಬೆರೆಯುವವರು. ಸೌದಿಯಲ್ಲಿದ್ದಾಗ ಪ್ರಭಾಕರ್ ಮತ್ತು ಬಶೀರ್ ಒಂದೇ ತಟ್ಟೆಯಲ್ಲಿ ಉಂಡವರು. ಪ್ರಭಾಕರ್ ಕುಟುಂಬ ಊರಲ್ಲಿ ಸಂಕಷ್ಟದಲ್ಲಿದ್ದಾಗ ಅವರ ತಾಯಿ ಚಿಕಿತ್ಸೆಗೆ ಬಶೀರ್ ಎಷ್ಟೋ ಬಾರಿ ಆರ್ಥಿಕ ಸಹಾಯ ಚಾಚಿದ್ದಾರೆ. ಧರ್ಮ, ಜಾತಿ ನೋಡದೆ ಯಾರೇ ಸಹಾಯ ಯಾಚಿಸಿದರೂ ಬಶೀರ್ ಇಲ್ಲ ಎಂದವರಲ್ಲ. ಧರ್ಮ ಮೀರಿ ನಿಂತ ಈ ಹಸನ್ಮುಖಿ ಬಶೀರ್ಗೆ ಎಂಥಾ ಶಿಕ್ಷೆ?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
‘25 ವರ್ಷಗಳ ಕಾಲ ವಿದೇಶದಲ್ಲಿ ದುಡಿದು ಕಳೆದೊಂದು ವರ್ಷದಿಂದ ಮಂಗಳೂರಲ್ಲಿ ಫಾಸ್ಟ್ ಫುಡ್ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದ ಬಶೀರ್ ಇಹಲೋಕ ತ್ಯಜಿಸಿ ಕರಾವಳಿಯನ್ನು ದುಃಖದ ಕಡಲಲ್ಲಿ ಮುಳುಗಿಸಿದ್ದಾರೆ.’ ಎಂದು ಬರೆದಿದ್ದಾರೆ.
ಅವರ ಫೇಸ್ಬುಕ್ ಫೋಸ್ಟ್ ಕೊಂಡಿ:
</p></p>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.