ADVERTISEMENT

ದೀಪಕ್‌ ಕೊಲೆಯಲ್ಲಿ ಬಿಜೆಪಿ ನಾಯಕರ ಕೈವಾಡ; ಎಚ್‌.ಡಿ.ಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST
ದೀಪಕ್‌ ಕೊಲೆಯಲ್ಲಿ ಬಿಜೆಪಿ ನಾಯಕರ ಕೈವಾಡ; ಎಚ್‌.ಡಿ.ಕೆ
ದೀಪಕ್‌ ಕೊಲೆಯಲ್ಲಿ ಬಿಜೆಪಿ ನಾಯಕರ ಕೈವಾಡ; ಎಚ್‌.ಡಿ.ಕೆ   

ಮೈಸೂರು: ‘ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಕೊಲೆಯಲ್ಲಿ ಕೆಲವು ಬಿಜೆಪಿ ನಾಯಕರ ಕೈವಾಡವಿದೆ ಎಂಬ ಮಾಹಿತಿ ನನಗೆ ಲಭ್ಯವಾಗಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇಲ್ಲಿ ಹೇಳಿದರು.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು. ‘ದೀಪಕ್ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಕೊಲೆಯ ಕಾರಣವನ್ನು ಸರ್ಕಾರ ಮುಚ್ಚಿಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಹೊಂದಾಣಿಕೆ ನಡೆದಿದೆ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ’ ಎಂದು ಆರೋಪಿಸಿದರು.

ಬಿಜೆಪಿ ನಾಯಕರ ಹೆಸರನ್ನು ಬಹಿರಂಗಪಡಿಸುವಂತೆ ಕೇಳಿದಾಗ, ‘ಬಿಜೆಪಿಯ ಕಾರ್ಪೊರೇಟರ್ ಒಬ್ಬರು ಕೊಲೆಯ ಹಿಂದೆ ಇದ್ದಾರೆ ಎಂಬ ಮಾಹಿತಿ ನನಗೆ ಲಭ್ಯವಾಗಿದೆ. ಅದು ನಿಜವೋ, ಸುಳ್ಳೋ ಎಂಬುದನ್ನು ಸರ್ಕಾರ ಹೇಳಬೇಕು. ಆರೋಪಿಗಳನ್ನು ಬಂಧಿಸಿ ಹಲವು ದಿನಗಳು ಕಳೆದರೂ ಸತ್ಯಾಸತ್ಯತೆ ಹೊರಗೆಳೆಯಲು ಸರ್ಕಾರಕ್ಕೆ ಆಗಿಲ್ಲ’ ಎಂದು ಟೀಕಿಸಿದರು.

ADVERTISEMENT

ಎತ್ತಿನಹೊಳೆ ಯೋಜನೆ ವಿರೋಧಿಸಿಲ್ಲ:

‘ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುತ್ತೇನೆ ಅಥವಾ ಬಯಲು ಸೀಮೆಗೆ ನೀರು ಕೊಡುವುದನ್ನು ವಿರೋಧಿಸುತ್ತಿರುವುದಾಗಿ ಎಲ್ಲೂ ಹೇಳಿಲ್ಲ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

***

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಶವದ ಮೇಲೆ ರಾಜಕೀಯ ಮಾಡಲು ಹೊರಟಿವೆ. ರಾಜ್ಯದ ಆಭಿವೃದ್ಧಿಯ ಹೆಸರಿನಲ್ಲಿ ಚುನಾವಣೆ ಎದುರಿಸಬೇಕೆಂಬ ಭಾವನೆ ಎರಡೂ ಪಕ್ಷಗಳಿಗೂ ಇಲ್ಲ.
– ಎಚ್‌.ಡಿ ಕುಮಾರಸ್ವಾಮಿ, ಅಧ್ಯಕ್ಷ, ಜೆಡಿಎಸ್ ರಾಜ್ಯ ಘಟಕ

***

ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ಕುಮಾರಸ್ವಾಮಿ ನಿಲ್ಲಿಸಲಿ. ತನಿಖೆ ದಾರಿ ತಪ್ಪಿಸುವ ಕೆಲಸ ಮಾಡುವುದು ಬೇಡ
– ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.