ADVERTISEMENT

ಅಪಘಾತ: ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
ಅಪಘಾತ: ಮೂವರ ಸಾವು
ಅಪಘಾತ: ಮೂವರ ಸಾವು   

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ಕರೂರು ವೃತ್ತದ ಸೇತುವೆ ಸಮೀಪ ಮಂಗಳವಾರ ಕಾರು ಮತ್ತು ಬೈಕ್‌ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ, ಬೆಂಗಳೂರಿನ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ಬೆಂಗಳೂರಿನ ಬಸವನಗುಡಿಯ ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿ ಅವರ ಸೋದರಿ, ಸೀತಾಬಾಯಿ ಸತ್ಯಧ್ಯಾನಾಚಾರ್ಯ ಕಟ್ಟಿ (38) ಹಾಗೂ ಬನಶಂಕರಿ ನಗರದ ರೇಖಾ ಬಿಲಾಸರಾವ್‌ ಕುಲಕರ್ಣಿ (57) ಹಾಗೂ ಬೈಕ್‌ ಸವಾರ, ಹರಿಹರ ತಾಲ್ಲೂಕಿನ ಗುಡ್ಡದ ಬೇವಿನಹಳ್ಳಿಯ ಹನುಮಂತಪ್ಪ ರಂಗಪ್ಪ ಕುಪ್ಪೇಲೂರ (40) ಮೃತಪಟ್ಟವರು.

ಬೈಕ್‌ಗೆ ಡಿಕ್ಕಿಯಾದ ಕಾರು ನಂತರ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಗುದ್ದಿದ ಪರಿಣಾಮ ಬೈಕ್‌ ಸವಾರ ಹಾಗೂ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‌ನ ಹಿಂಬದಿಯ ಸವಾರ ಪುಣ್ಯಾನಂದ ಹನುಮಂತಪ್ಪ ಕುಪ್ಪೇಲೂರ (18), ಬೆಂಗಳೂರಿನ ಬನಶಂಕರಿನಗರದ ಅನಿಲಕುಮಾರ ಬಿಂದುರಾವ್‌ ಮರಳಿ (56), ಉತ್ತರಾದಿಮಠದ ಜಯತೀರ್ಥ ರಾಮಾಚಾರಿ ಕಟ್ಟಿ (46), ಇಂದ್ರಾಬಾಯಿ ಮಧ್ವಾಚಾರ ಗಂಗೂರು (55), ಕಾಮಾಕ್ಷಿ ಪಾಳ್ಯದ ಶೇಖರ ಬಿ.ಎ ವೀರಕ್ಯಾತಯ್ಯ (41) ಹಾಗೂ ಬೈಕ್‌ನ ಹಿಂಬದಿಯ ಸವಾರ ಹರಿಹರ ತಾಲ್ಲೂಕಿನ ಗುಡ್ಡದ ಬೇವಿನಹಳ್ಳಿಯ ಪುಣ್ಯಾನಂದ ಹನುಮಂತಪ್ಪ ಕುಪ್ಪೇಲೂರ (18) ಗಾಯಗೊಂಡಿದ್ದಾರೆ.

ADVERTISEMENT

ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು, ಬೆಂಗಳೂರಿನಿಂದ ರಾಣೆಬೆನ್ನೂರಿನ ಕೋಟೆಯ ಉತ್ತರಾದಿಮಠದಲ್ಲಿ ನಡೆಯುವ ಆರಾಧನಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.