ಮಂಡ್ಯ: ‘ನಾಲ್ಕು ವರ್ಷಗಳ ಹಿಂದೆ ಲೋಕಾಯುಕ್ತದಲ್ಲಿ 14 ಸಾವಿರ ಪ್ರಕರಣ ದಾಖಲಾಗಿದ್ದವು. ಹಂತಹಂತವಾಗಿ ವಿಲೇವಾರಿ ಮಾಡಲಾಗಿದ್ದು ಈಗ ಪ್ರಕರಣಗಳ ಸಂಖ್ಯೆ 4 ಸಾವಿರಕ್ಕೆ ಇಳಿದಿವೆ’ ಎಂದು ಉಪ ಲೋಕಾಯುಕ್ತ ಸುಭಾಷ್ ಬಿ.ಆಡಿ ಗುರುವಾರ ಹೇಳಿದರು.
‘ಲೋಕಾಯುಕ್ತ ಕೇವಲ ದೂರು ಸ್ವೀಕರಿಸುವ ಸಂಸ್ಥೆಯಾಗಿ ಉಳಿದಿದೆ ಎಂಬ ಆರೋಪ ಸುಳ್ಳು. ಭ್ರಷ್ಚಾಚಾರ ನಿಗ್ರಹಕ್ಕೆ ಕಾನೂನಿನ ಅಡಿ ಸಿಗುವ ಸಂಪೂರ್ಣ ಅಧಿಕಾರ ಬಳಸಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಹಲವು ಪ್ರಕರಣಗಳಲ್ಲಿ ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಶಿಕ್ಷೆಗೆ ಶಿಫಾರಸು ಮಾಡಿದ್ದೇವೆ. ಕೆಲವು ಪ್ರಕರಣದಲ್ಲಿ ಸರ್ಕಾರ ಸ್ಪಂದಿಸಿದೆ, ಕೆಲ ಪ್ರಕರಣಗಳಲ್ಲಿ ಸ್ಪಂದಿಸಿಲ್ಲ. ಸಂಸ್ಥೆಯಲ್ಲಿ ದಾಖಲಾದ ಎಲ್ಲಾ ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಲಾಗುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಸರ್ಕಾರಿ ಭೂಮಿ ಒತ್ತುವರಿ ಪ್ರಕರಣಗಳನ್ನು ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ರಾಮನಗರ ಸುತ್ತಮುತ್ತ 1,500 ಅನಧಿಕೃತ ಖಾತೆಗಳನ್ನು ರದ್ದು ಮಾಡಿದ್ದೇವೆ. ರಾಜ್ಯದ ವಿವಿಧೆಡೆ ಸರ್ಕಾರಿ ಭೂಮಿ ಒತ್ತುವರಿಯಾಗಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಅಕ್ರಮವಾಗಿ ಖಾತೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿದ್ದೇವೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.