ಹಿರಿಯೂರು: ಸಂಸತ್ ಸದಸ್ಯ ಪ್ರತಾಪಸಿಂಹ ನೀಡಿದ ಮಾಹಿತಿ ಆಧರಿಸಿ ತಾಲ್ಲೂಕಿನ ಐಮಂಗಲ ಠಾಣೆಯ ಪೊಲೀಸರು ಗುರುವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಗಿಡ್ಡೋಬನಹಳ್ಳಿ ಸಮೀಪ 12 ಎತ್ತು ಹಾಗೂ 3 ಎಮ್ಮೆಗಳನ್ನು ತುಂಬಿದ್ದ ಲಾರಿಯೊಂದನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
‘ಕುಷ್ಟಗಿಯಲ್ಲಿ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಹೋಗುವ ಮಾರ್ಗದಲ್ಲಿ ಚಹಾ ಸೇವನೆಗೆಂದು ಪ್ರತಾಪ್ ಸಿಂಹ, ಹೋಟೆಲ್ಗೆ ಹೋಗುತ್ತಿದ್ದಾಗ, ಅಲ್ಲಿ ನಿಲುಗಡೆ ಮಾಡಿದ್ದ ಲಾರಿಯೊಂದರಲ್ಲಿ ಜಾನುವಾರುಗಳನ್ನು ತುಂಬಿರುವುದನ್ನು ಗಮನಿಸಿದ್ದಾರೆ. ಲಾರಿಯವರನ್ನು ವಿಚಾರಿಸಿದಾಗ ಒರಟಾಗಿ ಮಾತನಾಡಿದ್ದಾರೆ. ಈ ವಿಚಾರವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ ಗಮನಕ್ಕೆ ತಂದಿದ್ದರು. ನವೀನ್ ನಮಗೆ ತಿಳಿಸಿದರು. ತಕ್ಷಣ ಸ್ಥಳಕ್ಕೆ ಹೋದೆವು’ ಎಂದು ತಾಲ್ಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೇಶವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಸಂಸತ್ ಸದಸ್ಯರು ಐಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದರ ಮೇರೆಗೆ ಐಮಂಗಲ ಪಿಎಸ್ಐ ಲಿಂಗರಾಜ್ ಸ್ಥಳಕ್ಕೆ ಬಂದು ನಾಗಮಂಗಲದ ಮಂಜೇಗೌಡ ಮತ್ತು ಮಂಜುನಾಥ್ ಹಾಗೂ ಐಮಂಗಲದ ಕೆಂಚಪ್ಪ ಎನ್ನುವವರನ್ನು ವಶಕ್ಕೆ ಪಡೆದಿದ್ದಾರೆ. 15 ಜಾನುವಾರುಗಳನ್ನು ಚಿತ್ರದುರ್ಗದ ಸಮೀಪ ಇರುವ ಆದಿಚುಂಚನಗಿರಿ ಮಠದ ಗೋಶಾಲೆಗೆ ಕಳಿಸಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿಐ ಗುರುರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.