ADVERTISEMENT

ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ: 23 ಮಂದಿ ಅನರ್ಹ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST
ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ: 23 ಮಂದಿ ಅನರ್ಹ
ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ: 23 ಮಂದಿ ಅನರ್ಹ   

ಬೆಂಗಳೂರು: ನಕಲಿ ದಾಖಲೆಗಳನ್ನು ನೀಡಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಗೊಂಡಿದ್ದ 23 ಅಭ್ಯರ್ಥಿಗಳನ್ನು ಅಂತಿಮ ಪಟ್ಟಿಯಿಂದ  ಕೈಬಿಟ್ಟಿರುವ ಕಾಲೇಜು ಶಿಕ್ಷಣ ಇಲಾಖೆ, ಭವಿಷ್ಯದಲ್ಲಿ ಯಾವುದೇ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸದಂತೆ ಶಾಶ್ವತವಾಗಿ ಅನರ್ಹಗೊಳಿಸಿದೆ.

ಅಲ್ಲದೆ, ಈ ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.

20 ಅಭ್ಯರ್ಥಿಗಳು ನಕಲಿ ಪಿಎಚ್‌.ಡಿ ದಾಖಲೆ ನೀಡಿದ್ದಾರೆ. ಒಬ್ಬರು ಇತಿಹಾಸ ಎಂ.ಎ, ಇನ್ನೊಬ್ಬರು ಎಂ.ಕಾಂ, ಮತ್ತೊಬ್ಬರು ಕಂಪ್ಯೂಟರ್‌ ಸೈನ್ಸ್‌ ವಿಷಯದಲ್ಲಿ ನಡೆದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (ಎನ್‌ಇಟಿ) ನಕಲಿ ಪ್ರಮಾಣ ಪತ್ರ ನೀಡಿರುವುದು ಪತ್ತೆಯಾಗಿದೆ.

ADVERTISEMENT

ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳಲ್ಲಿ ಖಾಲಿ ಇರುವ 2,034 ಹುದ್ದೆಗಳಿಗೆ ಆಯ್ಕೆಗೊಂಡ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಾಲೇಜು ಶಿಕ್ಷಣ ಇಲಾಖೆ 2017ರ ಫೆ. 4ರಂದು ಪ್ರಕಟಿಸಿತ್ತು. ಈ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ನೈಜತೆ ಖಚಿತಪಡಿಸಿ ವರದಿ ನೀಡುವ ಹೊಣೆಯನ್ನು ಇಲಾಖೆ ಆಯುಕ್ತರಿಗೆ ವಹಿಸಲಾಗಿತ್ತು.

ಅಭ್ಯರ್ಥಿಗಳ ಮೂಲ ಅಂಕಪಟ್ಟಿ ಮತ್ತು ಇತರ ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆ ಖಚಿತಪಡಿಸಿಕೊಳ್ಳಲು ಆಯುಕ್ತರು ಹಾಗೂ ಬೆಂಗಳೂರು, ಮೈಸೂರು ಮತ್ತು ತುಮಕೂರು ವಿಶ್ವವಿದ್ಯಾಲಯಗಳ ಹಿರಿಯ ರಿಜಿಸ್ಟ್ರಾರ್‌ಗಳು, ಕಾರ್ಯನಿರ್ವಾಹಕ ನಿರ್ದೇಶಕರು, ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಮತ್ತು ಕಾಲೇಜು ಶಿಕ್ಷಣ ಇಲಾಖೆ ಹೆಚ್ಚುವರಿ ನಿರ್ದೇಶಕರನ್ನು ಒಳಗೊಂಡ ದಾಖಲೆಗಳ ಪರಿಶೀಲನಾ ಸಮಿತಿ ರಚಿಸಲಾಗಿತ್ತು.

ಈ ಸಮಿತಿ ಉನ್ನತ ಶಿಕ್ಷಣ ಪರಿಷತ್‌ನ ಮೂಲಕ ಸಂಬಂಧಪಟ್ಟ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿತ್ತಲ್ಲದೆ, ಅಧಿಕಾರಿಗಳ ತಂಡಗಳನ್ನು ಕಳುಹಿಸಿ ಪರಿಶೀಲನೆ ನಡೆಸಿತ್ತು. ಸಂಬಂಧಪಟ್ಟ ವಿಶ್ವವಿದ್ಯಾಲಯಗಳು 23 ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳು, ಪ್ರಮಾಣ ಪತ್ರಗಳು ನಕಲಿ ಎಂದೂ ಖಚಿತಪಡಿಸಿದ್ದವು. ಈ ಕುರಿತ ವರದಿಯನ್ನು ಕಾಲೇಜು ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿತ್ತು.

ಕೆಲವು ಅಭ್ಯರ್ಥಿಗಳು ಸಲ್ಲಿಸಿರುವ ಪಿಎಚ್‌. ಡಿ ಪ್ರಮಾಣ ಪತ್ರಗಳ ನೋಂದಣಿ ಸಂಖ್ಯೆ ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳಲ್ಲಿ ನೋಂದಣಿ ಆಗಿಲ್ಲ ಎಂದೂ ವಿಶ್ವವಿದ್ಯಾಲಯಗಳು ಸ್ಪಷ್ಟಪಡಿಸಿದ್ದವು.

ಅಭ್ಯರ್ಥಿಗಳು ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 20ರಡಿ ತಿಳಿಸಿರುವ ರೀತಿ  ದುರ್ನಡತೆ ಎಸಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.

ವಿಷಯ, ಹೆಸರು  ನಕಲಿ ಪ್ರಮಾಣಪತ್ರ

ಇಂಗ್ಲಿಷ್‌  ಶಿವಬಸಪ್ಪ ಮಸ್ಲಿ  (ಪಿಎಚ್‌.ಡಿ ಇಂಗ್ಲಿಷ್‌)

ಎ. ವಿರೂಪಾಕ್ಷ

ಶರಣಗೌಡ

ಪಂಚಾಕ್ಷರಯ್ಯ

ಎಸ್ತರ್‌ ಸರೀನಾ ಕುಮಾರಿ

ಚೇತನಾ ಪಾಟೀಲ

ಗುರುರಾಜ ಸಿದ್ದರಾಮಗೊಡಗೇರಿ

ಬಿ. ಮಹಾದೇವಿ

ಫಿರೋಜ್‌ ಅಹ್ಮದ್‌ ಭಾಗವಾನ್‌ (ಎಂ.ಎ ಇಂಗ್ಲಿಷ್‌ ಕೂಡಾ ನಕಲಿ)

ಮಿಥುನ್‌ (ಪಿಎಚ್‌.ಡಿ ಸಮಾಜಶಾಸ್ತ್ರ)

ಕೆ.ಎಚ್‌. ಕಾಂತರಾಜ (ಪಿಎಚ್‌.ಡಿ ಭೂಗೋಳ ಶಾಸ್ತ್ರ)

ಚಿದಾನಂದ ತರಳಬೆಂಚಿ (ಪಿಎಚ್‌.ಡಿ ವಾಣಿಜ್ಯ)

ಹುಲೆನರ ಗಣೇಶ (ಪಿಎಚ್‌.ಡಿ ವಾಣಿಜ್ಯ)

ಶಿಲ್ಪಾ ಕೊತನೂರು (ಪಿಎಚ್‌.ಡಿ ವಾಣಿಜ್ಯ)

ದಯಾನಂದ್‌ (ಪಿಎಚ್‌.ಡಿ ವಾಣಿಜ್ಯ)

ಎ. ಅಮಿತ್‌ಕುಮಾರ್‌ ರೆಡ್ಡಿ (ಪಿಎಚ್‌.ಡಿ ವಾಣಿಜ್ಯ)

ವಿ. ಕಮಾಲಕರ (ಪಿಎಚ್‌.ಡಿ ಭೌತಶಾಸ್ತ್ರ)

ಶ್ರೀದೇವಿ ನಾಯ್ಕ್ (ಪಿಎಚ್‌.ಡಿ ಕಂಪ್ಯೂಟರ್‌ ಸಯನ್ಸ್‌)

ಡಿ. ರಾಮಕೃಷ್ಣ ರೆಡ್ಡಿ (ಪಿಎಚ್‌.ಡಿ ಕಂಪ್ಯೂಟರ್‌ ಸಯನ್ಸ್‌)

ವಿಜಯಲಕ್ಷ್ಮಿ ರಾಮಚಂದ್ರ ರಾವ್‌ (ಎನ್‌ಇಟಿ ಇನ್‌ ಕಂಪ್ಯೂಟರ್‌ ಸಯನ್ಸ್‌)

ಮಂಜುಳಾ ನೂಕಾಪುರ (ಪಿಎಚ್‌.ಡಿ ರಾಜ್ಯಶಾಸ್ತ್ರ)

ಜಿ. ಗಿರಿಧರ ಎಂ.ಎ ಇತಿಹಾಸ

ಮಹೇಶ ಭೀಮಣ್ಣ ಕಿಲ್ಲಿಖ್ಯಾತರ್‌ ಎಂ.ಕಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.