ಬೆಂಗಳೂರು: ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಪ್ರತಿಯೊಂದೂ ಕ್ಷೇತ್ರದ ಬಗ್ಗೆ ಚಾರ್ಜ್ಶೀಟ್ ತಯಾರಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಬಿಜೆಪಿ ವರಿಷ್ಠರು ಪಕ್ಷದ ರಾಜ್ಯ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಚಾರ್ಜ್ಶೀಟ್ ತಯಾರಿಸುವಂತೆ ಸೂಚಿಸಿದ್ದರು. ಇದನ್ನು ಪ್ರಬಲ ಅಸ್ತ್ರವಾಗಿಟ್ಟುಕೊಂಡು ಪ್ರತಿ ಕ್ಷೇತ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ವರಿಷ್ಠರು ಉದ್ದೇಶಿಸಿದ್ದರು. ಆದರೆ, ಇಲ್ಲಿಯವರೆಗೆ ಬಹು
ತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಚಾರ್ಜ್ಶೀಟ್ ಸಿದ್ಧಪಡಿಸುವತ್ತ ಗಮನಹರಿಸಿಲ್ಲ.
ರಾಜ್ಯ ಮಟ್ಟದ ಚಾರ್ಜ್ಶೀಟ್ ಅನ್ನು ಪ್ರಧಾನಿ ನರೇಂದ್ರಮೋದಿ ಫೆಬ್ರುವರಿ 4 ರಂದು ಬೆಂಗಳೂರಿಗೆ ಭೇಟಿ ನೀಡಿದಾಗ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಪ್ರಣಾಳಿಕೆ ರೂಪಿಸಲು ಸೂಚನೆ ನೀಡಲಾಗಿದೆ. ಈ ಕಾರ್ಯವೂ ವಿಳಂಬವಾಗಿದೆ. ಜಯನಗರ ವಿಧಾನಸಭಾ ಕ್ಷೇತ್ರವನ್ನು ಹೊರತುಪಡಿಸಿ ಬೇರೆಲ್ಲೂ ಇದಕ್ಕೆ ಚಾಲನೆ ನೀಡದಿರುವ ಬಗ್ಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವಿಭಾಗ ಏನು ಮಾಡುತ್ತಿದೆ: ಪಕ್ಷದ ಸಾಮಾಜಿಕ ಜಾಲತಾಣ ಮಾಧ್ಯಮ ವಿಭಾಗ ಕಾಂಗ್ರೆಸ್ ಪೋಸ್ಟ್ಗಳಿಗೆ ಪ್ರತ್ಯುತ್ತರ ನೀಡುವುದಕ್ಕೆ ಸೀಮಿತವಾಗಿದೆ. ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಇಕ್ಕಟ್ಟಿಗೆ ಸಿಲುಕಿಸುವ ವಿಷಯಗಳನ್ನು ಏಕೆ ಸೃಷ್ಟಿಸುತ್ತಿಲ್ಲ ಎಂಬುದಾಗಿ ಜಾವಡೇಕರ್ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ವಿವಿಧ ವಿಷಯಗಳ ಬಗ್ಗೆ ಟ್ರೆಂಡ್ ಸೆಟ್ ಮಾಡಿ ಕಾಂಗ್ರೆಸ್ ನಮ್ಮನ್ನು ಅನುಕರಿಸುವಂತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ. ಈಗ ಮಾಡುತ್ತಿರುವ ಕೆಲಸ ಸಾಲದು. ರಾಜ್ಯದ ಸಮಸ್ಯೆಗಳ ಬಗ್ಗೆ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ. ಮಾಧ್ಯಮ ವಿಭಾಗ ಮತ್ತು ಸಾಮಾಜಿಕ ಜಾಲತಾಣ ವಿಭಾಗಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು. ಕ್ರಿಯಾಶೀಲ ಪೋಸ್ಟ್ಗಳನ್ನು ಸಿದ್ಧಪಡಿಸಬೇಕು. ದೆಹಲಿಯಿಂದ ಬಂದ ಪೋಸ್ಟ್ಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಕಳಿಸುವುದನ್ನು ಬಿಡಬೇಕು’ ಎಂದು ಜಾವಡೇಕರ್ ಹೇಳಿದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.