ADVERTISEMENT

ಕರ್ನಾಟಕ ಬಂದ್‌ಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2018, 12:24 IST
Last Updated 25 ಜನವರಿ 2018, 12:24 IST
ಕರ್ನಾಟಕ ಬಂದ್‌ಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ
ಕರ್ನಾಟಕ ಬಂದ್‌ಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ   

ಬೆಂಗಳೂರು:  ಮಹದಾಯಿ ನೀರಿಗಾಗಿ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಟ್ವಿಟರ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಬಹುತೇಕ ಜನರು ಬಂದ್‌ನಿಂದಾಗಿ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ. ಇದು ರಾಜ್ಯ ಸರ್ಕಾರವೇ ಪ್ರಾಯೋಜಿತ ಬಂದ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವರು ಬಂದ್‌ ಅನ್ನು ಬೆಂಬಲಿಸಿದ್ದಾರೆ.

‘ಹಿಂಸೆ ಮತ್ತು ಸಾಮಾನ್ಯರಿಗೆ ತೊಂದರೆ ಕೊಡುವುದನ್ನು ಬಿಟ್ಟು ಯಾವತ್ತಾದರೂ ಬಂದ್‌ಗಳು ಏನನ್ನಾದರೂ ಸಾಧಿಸಿವೆಯೇ?’ ಎಂದು ಸಾರಾ ಅಲಿ ಖಾನ್‌ ಕೇಳಿದ್ದಾರೆ.

ADVERTISEMENT

'ಮಹದಾಯಿ ವಿವಾದ ಬಗೆಹರಿಸಲು ಮೌನಿ ಪ್ರಧಾನಿ ಈಗಲಾದರೂ ಮಾತಾಡಬೇಕಿದೆ. ಕರ್ನಾಟಕದಲ್ಲಿ ನೆಲಸಿರುವ ಅನ್ಯ ರಾಜ್ಯದವರು ಕೂಡ ಹೋರಾಟವನ್ನು ಬೆಂಬಲಿಸಬೇಕಿದೆ’ ಎಂದು ಸಿ.ಸ್ವರ್ನಿಮಾ ಟ್ವೀಟ್‌ ಮಾಡಿದ್ದಾರೆ.

'ಬಂದ್‌ನಿಂದ ಕೆಲವು ಸೋಮಾರಿ ಸರ್ಕಾರಿ ನೌಕರರಿಗೆ ಒಂದು ದಿನ ಸಂಪೂರ್ಣ ವಿಶ್ರಾಂತಿ ಸಿಕ್ಕಂತಾಯಿತು!’ ಎಂದು ಪ್ರಿಯಾ ಮೇರಿ ಜೋಸೆಫ್‌ ಪ್ರತಿಕ್ರಿಯಿಸಿದ್ದಾರೆ.

‘ಸಂವಿಧಾನವನ್ನು ಜಾರಿಗೊಳಿಸಿದ ಮುನ್ನ ದಿನವೆ ಒತ್ತಾಯಪೂರ್ವಕ ಕರ್ನಾಟಕ ಬಂದ್, ಪದ್ಮಾವತ್‌ ಚಿತ್ರ ಬಿಡುಗಡೆ ಕುರಿತು ಹಿಂಸಾಚಾರ ನಡೆಯುತ್ತಿದೆ. ನಾವೇ ಆಯ್ಕೆ ಮಾಡಿದ ಜನಪ್ರತಿನಿಧಿಗಳು ಇವುಗಳನ್ನು ತಡೆಯುತ್ತಿಲ್ಲ. ಇಂತ ಸಂದರ್ಭದಲ್ಲೇ ನಾವು ರಾಷ್ಟ್ರೀಯ ಮತದಾರ ದಿನ ಆಚರಿಸುತ್ತಿದ್ದೇವೆ. ಪ್ರಜಾಪ್ರಭುತ್ವ ಚಿರಾಯುವಾಗಲಿ’ ಎಂದು ರಾಹುಲ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ.

‘ಕರ್ನಾಟಕ ಬಂದ್‌ನಿಂದಾಗಿ ಶಾಲೆಗಳು ಮುಚ್ಚಿವೆ. ಪದ್ಮಾವತ್‌ ಹಿಂಸಾಚಾರದಿಂದಾಗಿ ದೇಶದ ರಾಜಧಾನಿ ಪ್ರದೇಶ ಸ್ತಬ್ಧಗೊಂಡಿದೆ. ಆದರೂ, 21ನೇ ಶತಮಾನದಲ್ಲಿ ಶಿಕ್ಷಣ ನಮ್ಮನ್ನು ಮುನ್ನಡೆಸಲಿದೆ ಎಂದು ನಾವು ಯೋಚಿಸುತ್ತಿದ್ದೇವೆ’ ಎಂದು ಪಲ್ಲವಿ ಶರ್ಮಾ ವ್ಯಂಗ್ಯವಾಡಿದ್ದಾರೆ.

'ವಾಟಾಳ್‌ ನಾಗರಾಜ್‌ ಮತ್ತು ಸಾರಾ ಗೋವಿಂದ್‌ ಮೇಲೆ ನಿಷೇಧ ಹೇರಬೇಕು.  ವೈಯಕ್ತಿಕ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಇವರು ಕನ್ನಡತನ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಇವರು ಸಾಮಾನ್ಯ ಕನ್ನಡಿಗರನ್ನು ಪ್ರತಿನಿಧಿಸಲಾರರು’ ಎಂದು ಅವಿನಾಶ್‌ ರಂಗನಾಥ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.