ADVERTISEMENT

ಹನುಮ ಜಯಂತಿ ಮೆರವಣಿಗೆ; ನಂದಿ ಕಂಬ ಹೊತ್ತು ಕುಣಿದ ಸಂಸದ ಪ್ರತಾಪ್ ಸಿಂಹ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 7:25 IST
Last Updated 27 ಜನವರಿ 2018, 7:25 IST
ಕೃಪೆ: ಟ್ವಿಟರ್/ ಪ್ರತಾಪ್ ಸಿಂಹ
ಕೃಪೆ: ಟ್ವಿಟರ್/ ಪ್ರತಾಪ್ ಸಿಂಹ   

ಮೈಸೂರು: ಹುಣಸೂರು ನಗರದಲ್ಲಿ ಶನಿವಾರ ಆಯೋಜಿಸಿರುವ ಹನುಮ ಜಯಂತಿಯ ಮೆರವಣಿಗೆ ರಂಗನಾಥ ಬಡಾವಣೆಯಿಂದ ಆರಂಭವಾಗಿದೆ.

ಹನುಮ ಮಾಲೆ ಧರಿಸಿದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಕೇಸರಿ ಧ್ವಜಗಳು ಮಾರ್ಗದುದ್ದಕ್ಕೂ ರಾರಾಜಿಸುತ್ತಿವೆ. ಟ್ರ್ಯಾಕ್ಟರ್ ಮೇಲೆ ಹನುಮ ಮೂರ್ತಿ ಸಾಗುತ್ತಿದೆ. ಡೋಲು, ನಗಾರಿ, ಡೊಳ್ಳು, ತಮಟೆ ವಾದ್ಯಗಳು ರಂಗು ಮೂಡಿಸಿವೆ.

ಮೆರವಣಿಗೆಯು ಕಲ್ಕುಣಿಕೆ ವೃತ್ತ, ಹೊಟೇಲ್ ಶಬರಿ ಪ್ರಸಾದ್, ಹೊಟೇಲ್ ದೇವಿ ಪ್ರಸಾದ್, ಹಳೆ ಸೇತುವೆ, ರೋಟರಿ ವೃತ್ತ, ಹಳೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ಮಂಜುನಾಥ ದೇವಾಲಯ ತಲುಪಲಿದೆ. ಸಂಸದ ಪ್ರತಾಪ್‌ಸಿಂಹ, ಶಾಸಕ ಎಚ್.ಪಿ.ಮಂಜುನಾಥ್, ಮಾಜಿ ಸಂಸದ ವಿಶ್ವನಾಥ್ ಭಾಗಿಯಾಗಿದ್ದಾರೆ.

ADVERTISEMENT

ಹಲವು ನಿಬಂಧನೆಗಳ ನಡುವೆ ಮೆರವಣಿಗೆಗೆ ಜಿಲ್ಲಾಡಳಿತ ಅನುಮತಿ ನೀಡಿದೆ. ರಾಜಕೀಯ ಭಾಷಣಕ್ಕೆ ನಿರ್ಬಂಧ ವಿಧಿಸಲಾಗಿದೆ. 300 ಜನ ಸ್ವಯಂ ಸೇವಕರ ಮೆರವಣಿಗೆ ಶಿಸ್ತುಬದ್ಧವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದಾರೆ. ಐಜಿಪಿ ವಿಪುಲ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಡಿ.3 ರಂದು ಹನುಮ ಜಯಂತಿ ಮೆರವಣಿಗೆ ವೇಳೆ ಗಲಾಟೆ ನಡೆದು ಲಾಠಿಚಾರ್ಜ್ ಮಾಡಲಾಗಿತ್ತು. ಸಂಸದ ಪ್ರತಾಪ್‌ ಸಿಂಹ ಅವರನ್ನು ಬಂಧಿಸಿ, ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ನಂದಿ ಕಂಬ ಹೊತ್ತು ಕುಣಿದ ಸಂಸದ ಪ್ರತಾಪ್ ಸಿಂಹ
ಹನುಮ ಜಯಂತಿ ಮೆರವಣಿಗೆಯಲ್ಲಿ ಸಂಸದ ಪ್ರತಾಪ್ ಸಿಂಹ ತಲೆಗೆ ಕೇಸರಿ ಪೇಟ ತೊಟ್ಟು ನಂದಿ ಕಂಬ ಹೊತ್ತು ಕುಣಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.