ಬಾಗಲಕೋಟೆ: ಗೋವಾ ಸಂಪುಟದ ಸದಸ್ಯರು ಶಿಷ್ಟಾಚಾರ ಉಲ್ಲಂಘಿಸಿ ಕಣಕುಂಬಿಯ ಮಹದಾಯಿ ಜಲಾನಯನ ಪ್ರದೇಶಕ್ಕೆ ಕಳ್ಳತನದಿಂದ ಭೇಟಿ ನೀಡಿರುವುದು ಸರಿಯಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು.
ಜಿಲ್ಲೆಯ ಹುನಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಹಾಗೆ ಕದ್ದುಮುಚ್ಚಿ ಬರುವ ಅಗತ್ಯವಿರಲಿಲ್ಲ. ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿ ಬಂದಿದ್ದರೆ ಶಿಷ್ಟಾಚಾರದ ಪ್ರಕಾರ ಅಗತ್ಯ ಭದ್ರತೆ ನೀಡುತ್ತಿದ್ದೆವು ಎಂದರು.
ಹೀಗೆ ಕದ್ದು ಬರಲು ನಾವೇನು ಅಲ್ಲಿ ಅಕ್ರಮ ಕಾಮಗಾರಿಗಳನ್ನು ಕೈಗೊಂಡಿಲ್ಲ. ವಿವಾದ ನ್ಯಾಯಮಂಡಳಿಯ ಮುಂದೆ ಇರುವ ಕಾರಣ ಅಂತಹದ್ದಕ್ಕೆ ಅವಕಾಶವೂ ಇಲ್ಲ ಎಂದರು.
ಕಣಕುಂಬಿಗೆ ಭೇಟಿ ನೀಡಲು ಅವಕಾಶ ಕೊಡದಿದ್ರೆ ಮತ್ತೆ ಕರ್ನಾಟಕದ ಮೇಲೆ ಆರೋಪ ಮಾಡ್ತಾರೆ. ಅವರು ಬಂದು ನೋಡಿಕೊಂಡು ಹೋಗೋದಾದ್ರೆ ಹೋಗ್ಲಿ ಅಂತ ಸಿಎಂ ಹೇಳಿದ್ದಾರೆ.
ಕಾನೂನು ಬಾಹಿರವಾಗಿ ಯಾವುದೇ ಕೆಲಸ ಅಥವಾ ಕಾಮಗಾರಿಗಳನ್ನು ಮಾಡಿಲ್ಲ. ನಾವು ಪಾರ್ದರ್ಶಕವಾಗಿದ್ದೇವೆ ಎಂದರು.
ಇದೆಲ್ಲಾ ಗೋವಾದ ಜನರ ಕಣ್ಣು ಒರೆಸುವ ತಂತ್ರ ಎಂದರು. ಸಿ.ಎಂ ಬಂದಿಲ್ಲ ಗೋವಾ ಸ್ಪೀಕರ್ ಮತ್ತು ಸಚಿವ ಸಂಪುಟದ ಸದಸ್ಯರು ಬಂದಿದ್ದಾರೆ ಎಂದು ಎಂ.ಬಿ.ಪಾಟೀಲ ಮತ್ತೆ ಸ್ಪಷ್ಟನೆ ನೀಡಿದರು.
ಗೋವಾ ಮುಖ್ಯಮಂತ್ರಿ ಬಂದಿರಲಿಲ್ಲ...
ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿರುವ ಕಣಕುಂಬಿಗೆ ಮಧ್ಯಾಹ್ನ 12.35ರ ಸುಮಾರಿಗೆ ಗೋವಾ ರಾಜ್ಯದ ವಿಧಾನಸಭಾಧ್ಯಕ್ಷ ನೇತೃತ್ವದಲ್ಲಿ ಇಬ್ಬರು ಶಾಸಕರು, ಮಾಜಿ ಶಾಸಕರು ಸೇರಿ 40 ಮಂದಿ ಬೆಂಬಲಿಗರು, ಮಾಧ್ಯಮ ಪ್ರತಿನಿಧಿಗಳು ಭೇಟಿ ನೀಡಿದ್ದರು.
ಗೋವಾ ಮುಖ್ಯಮಂತ್ರಿ ಬಂದಿರಲಿಲ್ಲ ಎಂದು ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.