ADVERTISEMENT

ಪುಸ್ತಕದ ತುಂಬ ಸರ್ಕಾರದ ವಿರುದ್ಧ ಆಕ್ರೋಶ

‘ಹಡೆದವ್ವನ ಶಾಪ’ ಕೃತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST
‘ಹಡೆದವ್ವನ ಶಾಪ’ ಕೃತಿಯ ಮುಖಪುಟ
‘ಹಡೆದವ್ವನ ಶಾಪ’ ಕೃತಿಯ ಮುಖಪುಟ   

ಮಂಗಳೂರು: ‘ಸಹಮತ ಬಳಗ’ ಆಶ್ರಯದಲ್ಲಿ ಪ್ರಕಟವಾಗಿರುವ ‘ಹಡೆದವ್ವನ ಶಾಪ’ ಎಂಬ ಕೃತಿಯನ್ನು ಭಾನುವಾರ ಇಲ್ಲಿ ಬಿಡುಗಡೆ ಮಾಡಲಾಗಿದ್ದು, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಹತ್ಯೆಯಾದ 12 ಹಿಂದುತ್ವ ಕಾರ್ಯಕರ್ತರು, ಸಾವಿಗೀಡಾದ ಅಧಿಕಾರಿಗಳ ಕಥನ, ತಾಯಂದಿರ ಅಳಲನ್ನು ದಾಖಲಿಸಲಾಗಿದೆ.

ಪುಸ್ತಕದ ಉದ್ದಕ್ಕೂ ರಾಜ್ಯ ಸರ್ಕಾರಕ್ಕೆ ಶಾಪ ಹಾಕುವ ಶೈಲಿಯ ನಿರೂಪಣೆ ಇದ್ದು, ‘ಈ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ, ತನಿಖೆಯೂ ಸರಿಯಾಗಿ ನಡೆದಿಲ್ಲ’ ಎಂದು ಬಿಂಬಿಸುವ ಯತ್ನ ನಡೆದಿದೆ.

ಪೊಲೀಸರಿಗೇ ರಕ್ಷಣೆ ಇಲ್ಲ ಎಂಬುದಕ್ಕೆ ರೌಡಿಗಳಿಂದ ಹತ್ಯೆಯಾದ ಬೆಂಗಳೂರಿನ ಗ್ರಾಮಾಂತರ ಠಾಣೆ ಅಧಿಕಾರಿ ಎಸ್‌. ಜಗದೀಶ್‌, ಕಲಬುರ್ಗಿಯ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರ ವೃತ್ತಾಂತ ದಾಖಲಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಸಾವನ್ನು ಅವರ ಸಾಕು ನಾಯಿ ‘ಬ್ರೂನಿ’ಯ ಮೂಕ ಮಾತುಗಳಲ್ಲಿ ನಿವೇದಿಸಲಾಗಿದೆ. ಡಿವೈಎಸ್‌ಪಿ ಎಂ.ಕೆ.ಗಣಪತಿ ಪ್ರಕರಣವನ್ನೂ ದಾಖಲಿಸಲಾಗಿದೆ.

ADVERTISEMENT

‘ಹಡೆದವ್ವನ ಶಾಪ’ ಕೃತಿಯ ಕೊನೆಯಲ್ಲಿ ರಾಜ್ಯ ಹಾಗೂ ಹೊರದೇಶದಲ್ಲಿರುವ ತಾಯಂದಿರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಆಕ್ರೋಶಭರಿತ ಪತ್ರಗಳನ್ನು ದಾಖಲಿಸಲಾಗಿದೆ.

‘ಯುವ ಬ್ರಿಗೇಡ್‌ ಮಾರ್ಗದರ್ಶನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಹ್ವಾನಿಸಲಾದ ಹ್ಯಾಷ್‌ ಟ್ಯಾಗ್‌ಗೆ ರಾಜ್ಯದ ತಾಯಂದಿರು ಸಿದ್ದರಾಮಯ್ಯ ಸರ್ಕಾರದ ಕಾರ್ಯವೈಖರಿ ವಿರುದ್ಧ ದಾಖಲಿಸಿದ ಆಕ್ರೋಶ, ಹಾಕಿದ ಶಾಪ ಕೃತಿಗೆ ಪ್ರೇರಣೆ’ ಎಂದು ಸಹಮತ ಬಳಗದ ಸಂಘಟಕರು ಹೇಳಿದ್ದಾರೆ.
**
‘ಪ್ರತೀಕಾರಕ್ಕಾಗಿ ಬಶೀರ್ ಕೊಲೆ’

‘ಸುರತ್ಕಲ್‌ನ ದೀಪಕ್‌ ರಾವ್‌ ಒಬ್ಬ ಅಮಾಯಕ. ಆತನ ಹತ್ಯೆ ಅನವಶ್ಯಕವಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಬಶೀರ್‌ ಕೊಲೆಯಾಯಿತು. ಇದನ್ನು ಹೇಳಲು ನನಗೆ ಮುಜುಗರ ಇಲ್ಲ. ಮಾಧ್ಯಮ ವರದಿ ಆಧರಿಸಿ ನಾಳೆ ಪೊಲೀಸರೂ ಕೇಸು ಹಾಕಬಹುದು. ಹಾಕಲಿ ಹೆದರಲ್ಲ, ...’ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್‌ ಶೇಣವ ಅವರು ‘ಹಡೆದವ್ವನ ಶಾಪ’ ಕೃತಿ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿ ಹೇಳಿದರು.

‘ಹತ್ಯೆಯಾದ ದೀಪಕ್‌ ರಾವ್‌ ಅವರನ್ನು ಹಿಂದೂ ಸಂಘಟನೆಯ ಕಾರ್ಯಕರ್ತ ಎಂದು ಹೇಳಿದ ಸರ್ಕಾರದ ಪ್ರತಿನಿಧಿಗಳು ಹತ್ಯೆಯಾದ ಬಶೀರ್‌ ಅವರನ್ನು ಅಮಾಯಕ ಎಂದು ದಾಖಲಿಸಿತು. ಇದು ಸರ್ಕಾರದ ದ್ವಂದ್ವ ನೀತಿಗೆ ಸಾಕ್ಷಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.