ಹೊನ್ನಾವರ (ಉತ್ತರ ಕನ್ನಡ): ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಯನ್ನು ಬ್ಲಾಕ್ಮೇಲ್ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಐಡಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಮಧುಕರ ಭಾಗವತ, ಮುಂದಿನ ವಿಚಾರಣೆಯನ್ನು ಫೆ. 1ಕ್ಕೆ ನಿಗದಿಪಡಿಸಿದ್ದಾರೆ. ಅಂದು ನ್ಯಾಯಾಲಯದಲ್ಲಿ ತಮ್ಮ ಪ್ರಮಾಣೀಕೃತ ಹೇಳಿಕೆ ದಾಖಲಿಸುವಂತೆ, ಅರ್ಜಿದಾರ ಚಂದ್ರಶೇಖರ ಹೆಗಡೆ ಅವರಿಗೆ ಸೂಚಿಸಿದ್ದಾರೆ.
‘ದಿವಾಕರ ಶಾಸ್ತ್ರಿ, ಪ್ರೇಮಲತಾ ದಿವಾಕರ್, ಸಿ.ಎಂ.ಎನ್.ಶಾಸ್ತ್ರಿ ಎಂಬುವವರು, ಹಣಕ್ಕಾಗಿ ಒತ್ತಾಯಿಸಿ ರಾಘವೇಶ್ವರ ಸ್ವಾಮೀಜಿ ವಿರುದ್ಧ ಬ್ಲಾಕ್ಮೇಲ್ ತಂತ್ರ ನಡೆಸಿದ್ದಾರೆ’ ಎಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಚಂದ್ರಶೇಖರ ದೂರು ದಾಖಲಿಸಿದ್ದರು.
ದೂರಿನ ಅನ್ವಯ ದಿವಾಕರ ಶಾಸ್ತ್ರಿ ,ಪ್ರೇಮಲತಾ ದಿವಾಕರ್ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ವಿಚಾರಣೆ ನಡೆಸಿದ ಸಿಐಡಿ, ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳು ಇಲ್ಲವೆಂದು ನ್ಯಾಯಾಲಯಕ್ಕೆ ಬಿ–ರಿಪೋರ್ಟ್ ಸಲ್ಲಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.