ADVERTISEMENT

ಸತ್ಯ ಪರೀಕ್ಷೆಗೆ ಪಕ್ಷಗಳ ಹಿಂದೇಟು: ರಾವತ್

ಇವಿಎಂಗಳನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ, ಈ ಬಗ್ಗೆ ಗೊಂದಲ ಬೇಡ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST

ಬೆಂಗಳೂರು: ‘ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಬಗ್ಗೆ ಸಂದೇಹ ವ್ಯಕ್ತಪಡಿಸುವ ರಾಜಕೀಯ ಪಕ್ಷಗಳ ಮುಖಂಡರು ಇವುಗಳ ಪರೀಕ್ಷೆಗೆ ಕರೆದರೂ ಬರುವುದಿಲ್ಲ’ ಎಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಓಂಪ್ರಕಾಶ್‌ ರಾವತ್‌ ಸ್ಪಷ್ಟಪಡಿಸಿದರು.

‘ಇವಿಎಂಗಳನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಈ ಬಗ್ಗೆ ಗೊಂದಲಕ್ಕೆ ಒಳಗಾಗಬಾರದು’ ಎಂದು ಅವರು ವಿಧಾನಸಭಾ ಚುನಾವಣೆ ಪೂರ್ವಸಿದ್ಧತೆ ಕುರಿತು ವಿಕಾಸಸೌಧದಲ್ಲಿ ನಡೆದ ಎರಡು ದಿನಗಳ ಸಭೆಯ ಬಳಿಕ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಕೆಲವು ರಾಜ್ಯಗಳ ಚುನಾವಣೆ ಫಲಿತಾಂಶ ಬಂದ ಬಳಿಕ ಇವಿಎಂಗಳ ದುರ್ಬಳಕೆ ಆಗಿದೆ ಎಂದು ರಾಜಕೀಯ ಪಕ್ಷಗಳು ಆರೋಪಿಸಿದ್ದವು. ರಾಜಕೀಯ ಪಕ್ಷಗಳ ಸಂಶಯ ನಿವಾರಣೆಗಾಗಿ ಚುನಾವಣಾ ಆಯೋಗ ‘ಇವಿಎಂ ಚಾಲೆಂಜ್‌’ ಎಂಬ ಕಾರ್ಯಕ್ರಮ ಆಯೋಜಿಸಿತ್ತು. ರಾಜಕೀಯ ಪಕ್ಷಗಳು,ಚುನಾವಣಾ ಪ್ರಕ್ರಿಯೆಯಲ್ಲಿ ಆಸಕ್ತಿವುಳ್ಳ ತಂತ್ರಜ್ಞರನ್ನು ಆಹ್ವಾನಿಸಿದ್ದೆವು. ಆ ಸ್ಪರ್ಧೆಗೆ ಕೇವಲ ಎರಡು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಾತ್ರ ಬಂದಿದ್ದರು. ಬಂದವರೂ ಇವಿಎಂಗಳನ್ನು ಹ್ಯಾಕ್‌ ಮಾಡಲು ಮುಂದಾಗಲಿಲ್ಲ ಎಂದರು.

ADVERTISEMENT

ಮತಯಂತ್ರಗಳ ಪರೀಕ್ಷೆಗೆ ಅವಕಾಶ ಕೊಡಿ ಎಂಬ ಪತ್ರ ರಾಜ್ಯ ಸರ್ಕಾರದಿಂದ ಬಂದಿರುವುದು ನಿಜ. ಮತಯಂತ್ರಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತೇವೆ. ಅಲ್ಲಿ ಯಾರು ಬೇಕಾದರೂ ಬಂದು ಸತ್ಯಾಸತ್ಯತೆ ಪರಿಶೀಲಿಸಬಹುದು ಎಂದರು.

224 ಕ್ಷೇತ್ರಗಳಲ್ಲಿ ವಿವಿಪ್ಯಾಟ್‌: ‘ಚುನಾವಣೆಯಲ್ಲಿ 224 ವಿಧಾನಸಭಾ ಕ್ಷೇತ್ರಗಳ 56.694 ಮತಗಟ್ಟೆಗಳಲ್ಲಿ ವಿವಿಪ್ಯಾಟ್‌ ಒಳಗೊಂಡ ಇವಿಎಂಗಳನ್ನು ಬಳಸಲಾಗುವುದು. ಈ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳಿಗೂ ತಿಳಿಸಿದ್ದೇವೆ. ಇವಿಎಂಗಳ ಬಗ್ಗೆ ಜಾಗೃತಿ ಮೂಡಿಸುತ್ತೇವೆ’  ಎಂದರು.

ವಿವಿಪ್ಯಾಟ್ ಇರುವುದರಿಂದ ತಾವು ಚಲಾಯಿಸಿದ ಮತ ಯಾವ ಅಭ್ಯರ್ಥಿಗೆ ಮತ್ತು ಚಿಹ್ನೆಗೆ ಚಲಾವಣೆ ಆಗಿದೆ ಎಂಬುದನ್ನು ಮತದಾರ ಚೀಟಿಯಲ್ಲಿ ನೋಡಬಹುದು ಎಂದರು.

ಕಾನೂನು ಸುವ್ಯವಸ್ಥೆ ಬಿಗಿ: ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಲು ವೀಕ್ಷಕರನ್ನು ನೇಮಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.