ಕಾರವಾರ: ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಹಾಗೂ ಅವರ ಕುಟುಂಬಗಳಿಗೆ ಸಹಾಯ ಮಾಡುವ ಉದ್ದೇಶದಿಂದ, ಮುಂಬೈನ ಸಮೀರ್ ಸಿಂಗ್ ಎಂಬುವವರು ಇಡೀ ದೇಶವನ್ನು ಓಟದ ಮೂಲಕವೇ ಕ್ರಮಿಸಲು ಮುಂದಾಗಿದ್ದಾರೆ.
ಭಾರತ– ಪಾಕಿಸ್ತಾನ ಗಡಿ ವಾಘಾದಿಂದ ಡಿ.1ರಂದು ತಮ್ಮ ಪ್ರಯಾಣ ಆರಂಭಿಸಿರುವ ಅವರು, ರಾಜಧಾನಿ ನವದೆಹಲಿ ಮೂಲಕ ಸಾಗಿ ದೇಶದ ಪಶ್ಚಿಮ ಗಡಿಯಲ್ಲಿ ಈಗ ಪ್ರಯಾಣ ಬೆಳೆಸಿದರು. ಗೋವಾ ಮಾರ್ಗವಾಗಿ ಶುಕ್ರವಾರ ರಾಜ್ಯ ಪ್ರವೇಶಿಸಿದ ಅವರು, ‘ಪ್ರಜಾವಾಣಿ’ ಜತೆ ಮಾತನಾಡಿದರು.
‘ಬಾಲಿವುಡ್ ನಟ ಅಕ್ಷಯ್ ಕುಮಾರ್ ಆರಂಭಿಸಿದ, ಕೇಂದ್ರ ಸರ್ಕಾರದ ಸಹಭಾಗಿತ್ವದ ‘ಇಂಡಿಯಾಸ್ ಬ್ರೇವ್ ಹಾರ್ಟ್’ ಸಂಘಟನೆಯ ಜತೆಗೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಅದರ ಮೂಲಕ ಸೈನಿಕರ ಕುಟುಂಬಗಳಿಗೆ ನೆರವು ನೀಡಲಾಗುವುದು. ಸುಮಾರು 15 ಸಾವಿರ ಕಿ.ಮೀ ದೂರ ಕ್ರಮಿಸುವ ಗುರಿ ಇದೆ. ಮಂಗಳೂರು, ತಿರುವನಂತಪುರ, ಕನ್ಯಾಕುಮಾರಿ, ಚೆನ್ನೈ, ಕೊಲ್ಕತ್ತ ಮೂಲಕ ಸಾಗಿ ಈಶಾನ್ಯ ರಾಜ್ಯಗಳಲ್ಲಿ ಸಂಚರಿಸಿ ಪುನಃ ವಾಘಾ ತಲುಪಲಿದ್ದೇನೆ’ ಎಂದು ಅವರು ತಮ್ಮ ಪ್ರಯಾಣದ ದಾರಿಯನ್ನು ವಿವರಿಸಿದರು.
ಜನವರಿ 1, 2016ರ ನಂತರ ಹುತಾತ್ಮರಾದ ಸೈನಿಕರ ಕುಟುಂಬಕ್ಕೆ ಧನಸಹಾಯ ಮಾಡುವುದು ಹಾಗೂ ಭಾರತೀಯ ಸೇನೆಯ ಶಕ್ತಿಯ ಬಗ್ಗೆ ಅರಿವು ಮೂಡಿಸುವುದು ಈ ಓಟದ ಉದ್ದೇಶವಾಗಿದೆ ಎಂದರು.
‘ನಮ್ಮ ತಂಡದಲ್ಲಿ 10 ಸದಸ್ಯರಿದ್ದಾರೆ. ದಿನಕ್ಕೆ 100 ಕಿ.ಮೀ ಕ್ರಮಿಸಿ, ರಾತ್ರಿ ಹೋಟೆಲ್ಗಳಲ್ಲಿ ತಂಗುತ್ತೇವೆ. ಅಥವಾ ರಸ್ತೆ ಬದಿ ಟೆಂಟ್ ನಿರ್ಮಿಸಿಕೊಂಡು ವಾಸ್ತವ್ಯ ಹೂಡುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.