ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಸಂಚಾರ ದಟ್ಟಣೆ ನಿಯಂತ್ರಿಸಲು ಫೆ. 6ರಿಂದ 26ರ ವರೆಗೆ ಶ್ರವಣಬೆಳಗೊಳಕ್ಕೆ ವಾಹನ ಪ್ರವೇಶ ನಿಷೇಧಿಸಲಾಗಿದೆ.
ಪಟ್ಟಣ ಪ್ರವೇಶಿಸುವ ಹೊರವಲಯದಲ್ಲಿಯೇ ಖಾಸಗಿ ವಾಹನಗಳಿಗೆ 10 ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ. ಪ್ರಾಕೃತ ಆಸ್ಪತ್ರೆ ಹತ್ತಿರ, ನಾಗಮಂಗಲ ರಸ್ತೆ, ಮೇಲುಕೋಟೆ ರಸ್ತೆ, ಕೊತ್ತನಘಟ್ಟ ರಸ್ತೆ, ಕಂಠಿರಾಯಪುರ ರಸ್ತೆ, ಕಿಕ್ಕೇರಿ ರಸ್ತೆ, ಕಾಂತರಾಜಪುರ ರಸ್ತೆ, ಚನ್ನರಾಯಪಟ್ಟಣ ರಸ್ತೆ, ವಿಂಧ್ಯಗಿರಿ ಬೆಟ್ಟದ ಪಶ್ಚಿಮ ಭಾಗ ಹಾಗೂ ಮಟ್ಟನವಿಲೆ ರಸ್ತೆ ಮಾರ್ಗಗಳಲ್ಲಿ ಖಾಸಗಿ ವಾಹನ ನಿಲ್ಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.
ಸರ್ಕಾರಿ ಮತ್ತು ಗಣ್ಯರ ವಾಹನಗಳಿಗೆ ಮಾತ್ರ ಕ್ಷೇತ್ರಕ್ಕೆ ಪ್ರವೇಶ ಇದೆ. ಪಾರ್ಕಿಂಗ್ಗಾಗಿಯೇ ಅಂದಾಜು 106 ಎಕರೆ ಪ್ರದೇಶ ಹಾಗೂ ಕೆಎಸ್ಆರ್ಟಿಸಿ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಸುಮಾರು 19 ಎಕರೆ ಪ್ರದೇಶ ಬಳಸಿಕೊಳ್ಳಲಾಗುತ್ತಿದೆ. ಜತೆಗೆ ಮೂರು ಹೆಲಿಪ್ಯಾಡ್ ಸಹ ನಿರ್ಮಿಸಲಾಗಿದೆ.
ವಿಶೇಷ ರೈಲು ಸಂಚಾರ:
ನೈರುತ್ಯ ವಿಭಾಗೀಯ ರೈಲ್ವೆ ಫೆ. 7ರಿಂದ 26ರ ವರೆಗೆ ವಿಶೇಷ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಿದೆ. ಯಶವಂತಪುರ– ಹಾಸನ ಹಾಗೂ ಹಾಸನ– ಯಶವಂತಪುರ, ಮೀರಜ್– ಹಾಸನ ಹಾಗೂ ಹಾಸನ– ಮೀರಜ್ ನಡುವೆ ರೈಲುಗಳು ಸಂಚರಿಸಲಿವೆ.
ಯಶವಂತಪುರದಿಂದ ಶ್ರವಣಬೆಳಗೊಳಕ್ಕೆ ಪ್ರತಿನಿತ್ಯ ಡೆಮು ವಿಶೇಷ ರೈಲು, ಎಕ್ಸ್ಪ್ರೆಸ್ ರೈಲು (ಶನಿವಾರ ಇರುವುದಿಲ್ಲ), ಪ್ರಯಾಣಿಕರ ರೈಲು, ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲುಗಳು ಸಂಚರಿಸಲಿವೆ. ಇವು ಮುಂಜಾನೆ 5.15 ರಿಂದ ಪ್ರಯಾಣ ಆರಂಭಿಸಿ, ರಾತ್ರಿ 7.30ರ ವರೆಗೆ ಸಂಚರಿಸಲಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.