ಬೆಂಗಳೂರು: ಮತದಾರರ ಪಟ್ಟಿಯಿಂದ ಕೈಬಿಡುವಂತೆ ಕೋರಿ ಚುನಾವಣಾ ಆಯೋಗಕ್ಕೆ ಇಲ್ಲಿಯವರೆಗೆ 9 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ಈವರೆಗೆ 5 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ.
ಅರ್ಜಿ ಮತ್ತು ಅದರಲ್ಲಿರುವ ಕಾರಣಗಳನ್ನು ಪರಿಶೀಲಿಸಿ ಹೆಸರುಗಳನ್ನು ಕೈಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೃತಪಟ್ಟವರು, ಊರು ಅಥವಾ ಸ್ಥಳ ಬದಲಾವಣೆ ಮಾಡಿದವರು, ನಕಲಿ ಹೆಸರುಗಳನ್ನು ಕೈಬಿಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೆ.ಎನ್. ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
ರಾಜ್ಯ ವ್ಯಾಪಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ಇನ್ನೂ ಚಾಲ್ತಿಯಲ್ಲಿದೆ. ಇದೇ ತಿಂಗಳ 12 ರವರೆಗೆ ಪರಿಷ್ಕರಣೆಗಾಗಿ ಅರ್ಜಿ ಸ್ವೀಕರಿಸಲಾಗುತ್ತದೆ. ಇದೇ 28 ರಂದು ಮತದಾರರ ಪಟ್ಟಿಯ ಅಂತಿಮ ಕರಡು ಪ್ರಕಟಿಸಲಾಗುವುದು. ಆಗ ಪಟ್ಟಿಯಿಂದ ತೆಗೆದು ಹಾಕಿದ ಮತದಾರರ ನಿಖರ ಮಾಹಿತಿ ಸಿಗುತ್ತದೆ ಎಂದು ಅವರು ತಿಳಿಸಿದರು.
2017 ರ ನವೆಂಬರ್ 30 ರಂದು ಪ್ರಕಟಿಸಿದ ಕರಡು ಮತದಾರರ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ ಒಟ್ಟು 4.9 ಕೋಟಿ ಮತದಾರರು ಇದ್ದಾರೆ. ಇದರಲ್ಲಿ ಪುರುಷರ ಸಂಖ್ಯೆ ಸಂಖ್ಯೆ 2.48 ಕೋಟಿ (ಶೇ 50.74), ಮಹಿಳೆಯರು 2.41 ಕೋಟಿ (ಶೇ. 49.24), ತೃತೀಯ ಲಿಂಗಿಗಳು 4340 ಇದ್ದಾರೆ. ಅಂತಿಮ ಚಿತ್ರಣ ಅಂತಿಮ ಪಟ್ಟಿ ಬಿಡುಗಡೆ ಬಳಿಕ ಸಿಗಲಿದೆ. 2013 ರ ವಿಧಾನಸಭಾ ಚುನಾವಣೆಯಲ್ಲಿ 4.36 ಕೋಟಿ ಮತದಾರರಿದ್ದರು.
ಈವರೆಗೆ ಒಟ್ಟು 28 ಲಕ್ಷ ಅರ್ಜಿಗಳು ಬಂದಿವೆ. ಹೊಸದಾಗಿ ನೋಂದಾಯಿಸಲು ಅಥವಾ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ವಿಳಾಸ ಬದಲಾಯಿಸಲು 12 ಲಕ್ಷ ಅರ್ಜಿಗಳು, ಹೆಸರು ತೆಗೆದು ಹಾಕಲು, ಸತ್ತವರ ಹೆಸರು ಕೈಬಿಡಲು ಒಟ್ಟು 9 ಲಕ್ಷ ಅರ್ಜಿಗಳು ಬಂದಿವೆ. ಉಳಿದ ಅರ್ಜಿಗಳು ಫಾರಂ 8 ಮತ್ತು 8 ಎ ಅಡಿ ಬಂದಿವೆ. 28,140 ಸೇವಾ ಮತದಾರರ(ಸರ್ವಿಸ್ ವೋಟರ್ಸ್) ಹೆಸರುಗಳು ಸೇರ್ಪಡೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.