ಹಿರಿಯೂರು: ಹುಟ್ಟಿದ ಐದನೇ ಮಗುವೂ ಹೆಣ್ಣು ಎಂಬ ಕಾರಣಕ್ಕೆ ಅದನ್ನು ಪತ್ನಿಗೆ ತಿಳಿಸದೇ ವ್ಯಕ್ತಿಯೊಬ್ಬ ದಾನ ಮಾಡಿದ್ದು, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮಗುವನ್ನು ತಾಯಿ ಮಡಿಲಿಗೆ ಸೇರಿಸಿದ್ದಾರೆ.
ತಾಲ್ಲೂಕಿನ ಹಳೆ ಯಳನಾಡು ಗ್ರಾಮದ ಲಂಬಾಣಿ ತಾಂಡಾದ ಕುಮಾರನಾಯ್ಕ ಹಾಗೂ ಅವರ ಅತ್ತೆ ಜಯಾಬಾಯಿ ಮಗುವನ್ನು ದಾನ ಮಾಡಿ
ದವರು. 35 ವರ್ಷ ವಯಸ್ಸಿನ ಸುಮಾ ಅವರನ್ನು ಫೆ. 2 ರಂದು ಆಶಾ ಕಾರ್ಯಕರ್ತೆ ರಾಜಮ್ಮ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದರು. ಸಂಜೆ 5 ರ ವೇಳೆಗೆ ಸಹಜ ಹೆರಿಗೆ ಆಗಿತ್ತು. ಫೆ. 5 ರಂದು ತಾಯಿ–ಮಗು ಮನೆಗೆ ಹೋಗಬಹುದು ಎಂದು ವೈದ್ಯರು ಸಲಹೆ ನೀಡಿದ್ದರು.
ಮನೆಗೆ ಹೊರಟಾಗ, ಜಯಾಬಾಯಿ ಮಗುವನ್ನು ತಾನು ಕರೆದುಕೊಂಡು ಬರುವುದಾಗಿ ಸುಳ್ಳು ಹೇಳಿ ಮಗಳನ್ನು ಕಳುಹಿಸಿ, ಆಜಾದ್ ನಗರದ
ಮಕ್ಕಳಿಲ್ಲದ ದಂಪತಿಗೆ ದಾನ ಮಾಡಿದ್ದಾರೆ.
ತಗಾದೆ ತೆಗೆಯಬಾರದೆಂದು ಕುಮಾರನಾಯ್ಕ ಸುಮಾ ಅವರನ್ನು ಸುಮ್ಮನಿರಿಸಿದ್ದಾನೆ. ಫೆ.7ರಂದು ಆಶಾ ಕಾರ್ಯಕರ್ತೆಯು ಬಾಣಂತಿ–ಮಗು
ವನ್ನು ನೋಡಲು ಹೋದಾಗ ವಿಚಾರ ಗೊತ್ತಾಗಿ, ತಕ್ಷಣ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಶಿಶು ಅಭಿವೃದ್ಧಿ ಅಧಿಕಾರಿ ಮುದ್ದಣ್ಣ, ಅಧೀಕ್ಷಕಿ ತಾಯಿಮುದ್ದಮ್ಮ ಪೊಲೀಸರ ನೆರವು ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ತಿಳಿದುಬಂದಿದೆ.
‘ಮಗುವನ್ನು ಮಾರಿಲ್ಲ; ದಾನ ಕೊಟ್ಟೆವು. ಗಂಡು ಮಗು ಆಗಲಿ ಎಂಬ ಆಸೆ ಇತ್ತು. ಬಡತನದಿಂದಾಗಿ ಹೀಗೆ ಮಾಡಿದೆವು. ನಮ್ಮ ಮಗುವನ್ನು ನಾವೇ ಸಾಕುತ್ತೇವೆ’ ಎಂದು ಕುಮಾರನಾಯ್ಕ ಹಾಗೂ ಜಯಾಬಾಯಿ ಅವರು ಮುದ್ದಣ್ಣ ಅವರ ಮುಂದೆ ಗೋಗರೆದರು.
‘ಅತ್ತೆ–ಅಳಿಯನ ಮಾತುಗಳ ಮೇಲೆ ನಂಬಿಕೆ ಬರದ ಕಾರಣ ಈ ವಿಚಾರವನ್ನು ಮಕ್ಕಳ ಕಲ್ಯಾಣ ಸಮಿತಿ ಗಮನಕ್ಕೆ ತರುತ್ತೇನೆ. ಆರು ದಿನದ ಎಳೆಯ ಮಗುವನ್ನು ಸದ್ಯಕ್ಕೆ ತಾಯಿಯ ವಶಕ್ಕೆ ಕೊಡುತ್ತಿದ್ದೇವೆ.
ಬಡತನದ ಕಾರಣಕ್ಕೆ ಸಾಕಲು ಆಗದಿದ್ದರೆ ಈ ಕುಟುಂಬದ ಎಲ್ಲ ಮಕ್ಕಳನ್ನು ಬಾಲಮಂದಿರದಲ್ಲಿರಿಸಿ, ಪೋಷಣೆ ಮಾಡಲಾಗುವುದು’ ಎಂದು ಮುದ್ದಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.