ADVERTISEMENT

ಬುಟ್ಟಿಯಲ್ಲಿ ಮರಳು ಹೊತ್ತವರೂ ಜೈಲಿಗೆ: ಜೀವರಾಜ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 19:30 IST
Last Updated 8 ಫೆಬ್ರುವರಿ 2018, 19:30 IST

ಬೆಂಗಳೂರು: ಆಶ್ರಯ ಯೋಜನೆಯಡಿ ಮನೆ ಕಟ್ಟಲು ಬುಟ್ಟಿಯಲ್ಲಿ ಮರಳು ತುಂಬಿಸಿ ತಲೆ ಮೇಲೆ ಹೊತ್ತುಕೊಂಡು ಹೋಗುತ್ತಿದ್ದವರನ್ನು ಬಂಧಿಸಿದ ಪೊಲೀಸರು 10 ದಿನ ಜೈಲಿಗೆ ಕಳುಹಿಸಿದ್ದರು ಎಂಬ ಬಿಜೆಪಿಯ ಡಿ.ಎನ್. ಜೀವರಾಜ್ ಹೇಳಿಕೆ, ಸದನದಲ್ಲಿ ಮಾತಿಕ ಚಕಮಕಿಗೆ ಕಾರಣವಾಯಿತು.

ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಣೆ ಕುರಿತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡುತ್ತಿದ್ದರು.

ಆಗ ಮಧ್ಯ ಪ್ರವೇಶಿಸಿದ ಜೀವರಾಜ್‌, ಲಾರಿ, ಟ್ರಾಕ್ಟರ್‌ನಲ್ಲಿ ಅಕ್ರಮವಾಗಿ ಮರಳು ಸಾಗಿಸುವವರಿಗೆ ಈ ರಾಜ್ಯದಲ್ಲಿ ಯಾವುದೇ ಅಡ್ಡಿಯಿಲ್ಲ. ಬಡ
ವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ ಎಂದರು. ‘ಯಾವ ಠಾಣೆಯಲ್ಲಿ ಆಗಿದೆ ಹೇಳಿ, ಕೂಡಲೇ ಅಧಿಕಾರಿಗಳನ್ನು ಅಮಾನತು ಮಾಡುತ್ತೇನೆ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ADVERTISEMENT

‘ನೀವು ಗೃಹ ಸಚಿವರಾದ ಮೇಲೆ ಅಲ್ಲ. ಹಿಂದಿನ ಗೃಹ ಸಚಿವರಾದ ಪರಮೇಶ್ವರ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಆಗ ಕೊಪ್ಪ ತಾಲ್ಲೂಕಿನ ಹರಿಹರಪುರದಲ್ಲಿ ಈ ಪ್ರಕರಣ ನಡೆದಿತ್ತು. ಆಗ ಜೈಲಿಗೆ ಹೋದವರು ಇನ್ನೂ ಕೋರ್ಟ್‌ಗೆ ಅಲೆದಾಡುತ್ತಿದ್ದಾರೆ’ ಎಂದು ಜೀವರಾಜ್ ಹೇಳಿದರು. ‘ಸುಳ್ಳು ಹೇಳುವುದೇ ನಿಮ್ಮ ಕೆಲಸ ಹೇಳಿ’ ಎಂದು ಸಚಿವ ವಿನಯ ಕುಲಕರ್ಣಿ ಕೆಣಕಿದರು.

ಇದರಿಂದ ಸಿಟ್ಟಾದ ಜೀವರಾಜ್‌, ‘ನಿಮ್ಮ ತಲೆಗೂ ನಾಲಿಗೆಗೂ ಸಂಪರ್ಕ ತಪ್ಪಿ ಹೋದಂತಿದೆ. ನೆಟ್ಟಗೆ ಮಾತನಾಡಿ. ನೀವು ಶಾಸಕರಾಗಿದ್ದಾಗ ಚೆನ್ನಾಗಿದ್ದೀರಿ. ಈಗ ನಿಮಗೆ ಪಿತ್ತ ನೆತ್ತಿಗೇರಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.